ತಿರುವನಂತಪುರಂ: ಕೇರಳದಲ್ಲಿ ಪಾದ್ರಿ ಸೇರಿ 50 ಕ್ರಿಶ್ಚಿಯನ್ ಕುಟುಂಬಗಳು (Christian family) 2023ರ ಡಿಸೆಂಬರ್ 30ರಂದು ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ಅಲ್ಲಿನ ಬಿಜೆಪಿ (BJP) ಘಟಕವು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಕೇಂದ್ರ ಸಚಿವ ವಿ. ಮುರಳೀಧರನ್ ಅವರ ನೇತೃತ್ವದಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆ ನೀಲಕ್ಕಲ್ ಭದ್ರಾಸನಂನ ಆರ್ಥೋಡಾಕ್ಸ್ ಚರ್ಚ್ ಕಾರ್ಯದರ್ಶಿ ಫಾಧರ್ ಶೈಜು ಕುರಿಯನ್ ಸೇರಿ ಸುಮಾರು 50 ಕುಟುಂಬಗಳು ಕಮಲ ಪಳಯ ಸೇರಿಕೊಂಡಿವೆ ಎನ್ನಲಾಗಿದೆ.
ಕೇರಳದಲ್ಲಿ ಕ್ರಿಶ್ಚಿಯನ್ನರ ವಿಶ್ವಾಸ ಗಳಿಸಲು ಬಿಜೆಪಿ ಸ್ನೇಹಯಾತ್ರೆ ಕಾರ್ಯಕ್ರಮ ಆಯೋಜಿಸುವಂತೆ ಬಿಜೆಪಿ ಸೇರ್ಪಡೆಯಾದವರು ತಿಳಿಸಿದ್ದಾರೆ. ಇನ್ನು ಕ್ರಿಶ್ಚಿಯನ್ ಕುಟುಂಬಗಳು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಬಂದಿವೆ. ಕಾಂಗ್ರೆಸ್ ಹಾಗೂ ಸಿಪಿಎಂ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜೊತೆಗೆ ಹೀಗೆ ಮುಂದುವರಿಸಿದರೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂಬುದಾಗಿಯೂ ಬಿಜೆಪಿ ಎಚ್ಚರಿಕೆ ನೀಡಿದೆ.
ಮೋದಿ ಸರ್ಕಾರವು (Narendra Modi) ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ದೃಷ್ಟಿಯಲ್ಲಿ ಮುನ್ನಡೆಯುತ್ತಿದೆ. ಕಳೆದ ಒಂದು ದಶಕದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ‘ಸ್ನೇಹ ಯಾತ್ರೆ’ಯಂತಹ ಕಾರ್ಯಕ್ರಮಗಳು ಭಾರತೀಯ ಜನತಾ ಪಕ್ಷದ ಬಗ್ಗೆ ಅಲ್ಪಸಂಖ್ಯಾತರು ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿವೆ. ಅಭಿವೃದ್ಧಿ ರಾಜಕಾರಣದಲ್ಲಿ ಪಾಲ್ಗೊಳ್ಳಲು ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆಯಿದೆ ಎಂದು ಬಿಜೆಪಿ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದೆ.
ಈಸ್ಟರ್ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಯಾತ್ರೆ ಕೈಗೊಂಡು ಕ್ರಿಶ್ಚಿಯನ್ನರ ಮನೆಗಳು ಮತ್ತು ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ದೇಶವಿರೋಧಿ ಕೃತ್ಯಕ್ಕೆ ಸಾಥ್ – ತೆಹ್ರೀಕ್-ಎ-ಹುರಿಯತ್ಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ