– ಹಾಟ್ಸ್ಟಾಟ್ ಕೇರಳದಲ್ಲಿ ಸೋಂಕು ಹಿಡಿತಕ್ಕೆ ಬರಲು ಕಾರಣವೇನು?
– ಕೇರಳದ 8 ಜಿಲ್ಲೆಗಳು ಕೊರೊನಾ ರಹಿತ
ತಿರುವನಂತಪುರಂ: ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದ್ದ ಕೇರಳದಲ್ಲಿ ಈಗ ಕೊರೊನಾ ಹಿಡಿತಕ್ಕೆ ಬಂದಿದೆ. ಕೊರೊನಾ ವೈರಸ್ ನ ಹಾಟ್ಸ್ಟಾಟ್ ಆಗಿದ್ದ ಕೇರಳ ಅಲ್ಲಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ಕಾರ್ಯದಿಂದ ಕೊರೊನಾ ಮುಕ್ತವಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಇಂದು ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿದೆ. ಭಾರತದಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿಕೊಂಡಿದ್ದು ಕೇರಳದಲ್ಲಿ, ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ಈ ಸೋಂಕು ಜನವರಿ 30ರಂದು ಭಾರತದಲ್ಲಿ ಮೊದಲಿಗೆ ಪತ್ತೆಯಾಗಿತ್ತು. ಇದಾದ ನಂತರ ಕೇರಳ ಕೊರೊನಾ ಹಾಟ್ಸ್ಟಾಟ್ ಆಗಿತ್ತು.
ಈ ಹಿಂದೆಯಿಂದಲೂ ಈ ರೀತಿಯ ಪರಿಸ್ಥಿತಿಯನ್ನು ಬಹಳ ಎದುರಿಸಿದ್ದ ಕೇರಳ, ನಿಫಾ, ಹೆಚ್1ಎನ್1, ಚಿಕನ್ಗುನ್ಯಾನಂತಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿತ್ತು. ಈ ಅನುಭವದಿಂದಲೇ ಕೇರಳ ಜನವರಿ 24ರಂದೇ ಕೊರೊನಾ ಕಂಟ್ರೋಲ್ ರೂಂ ಅನ್ನು ಓಪನ್ ಮಾಡಿತ್ತು. ಭಾರತದಲ್ಲಿ ಕೊರೊನಾ ಪ್ರಭಾವ ಹೆಚ್ಚಾಗುವುದಕ್ಕೂ ಮುನ್ನವೇ ಜನರನ್ನು ಐಸೋಲೇಟ್ ಮಾಡಲು ಶುರು ಮಾಡಿತ್ತು. ಜೊತೆಗೆ ಎನ್ 95 ಮಾಸ್ಕ್ ಗಳು ಮತ್ತು ಪಿಪಿಇ ಕಿಟ್ಗಳ ಖರೀದಿಗೆ ಮುಂದಾಗಿತ್ತು.
ದಿಟ್ಟ ನಿರ್ಧಾರ ತೆಗೆದುಕೊಂಡ ಶೈಲಜಾ:
ಇಂದು ಕೇರಳದಲ್ಲಿ ಕೊರೊನಾ ಹಿಡಿತಕ್ಕೆ ಬರಲು ಕಾರಣ ಅಲ್ಲಿನ ಕೊರೊನಾ ವಾರಿಯರ್ಸ್ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ನಿರ್ಧಾರಗಳು. ಮೊದಲ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತಿದ್ದ ಶೈಲಜಾ ಅವರು, ಮೂರು ಕಾರ್ಯಸೂಚಿಗಳನ್ನು ಜಾರಿಗೆ ತಂದಿದ್ದರು. ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸ್ನೇಹಿಯಾಗಿರಬೇಕು. ಹೈಟೆಕ್ ಆಗಿರಬೇಕು. ಹಣವಿಲ್ಲದ ಅಥವಾ ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡಬೇಕು ಎಂದು ಮೂರು ಕಾರ್ಯಸೂಚಿಗಳನ್ನು ಮಾಡಿಕೊಂಡಿದ್ದರು.
ಈ ವಿಚಾರದ ಬಗ್ಗೆ ಮಾತನಾಡಿರುವ ಶೈಲಜಾ ಅವರು, ಈ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳು ಬಹಳ ಮುಖ್ಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಈಗ ನಮ್ಮಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪರೀಕ್ಷಾ ಪ್ರಯೋಗಾಲಯಗಳನ್ನು ಮಾಡಲಾಗಿದೆ. ಅವು ವಿವಿಧ ರೋಗಗಳನ್ನು ಆರಂಭಿಕವಾಗಿಯೇ ಕಂಡುಹಿಡಿಯಲು ಸಮರ್ಥವಾಗಿವೆ. ನಮ್ಮಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹೊಸ ಉಪಕರಣಗಳನ್ನು ಹೊಂದಿವೆ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
2018ರಲ್ಲಿ ನಿಫಾ ವೈರಸ್ ಬಂದಾಗಿನಿಂದ ನಮ್ಮ ಸರ್ಕಾರ ವೈದ್ಯಕೀಯ ಸಿಬ್ಬಂದಿಗೆ ನಿಯಮಿತ ತರಬೇತಿಯನ್ನು ಜಾರಿಗೆ ತಂದಿತು. ಇದು ಈಗ ಕೊರೊನಾ ತಡೆಗಟ್ಟುವಲ್ಲಿ ನಮಗೆ ಸಹಾಯವಾಯಿತು. ನಮ್ಮ ವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕ ರೋಗದ ವಿರುದ್ಧ ಏಕಾಏಕಿ ತಯಾರಿಗಾಗಿ ಅಣಕು ಡ್ರಿಲ್ಗಳನ್ನು ಸಹ ಮಾಡಿದ್ದರು. ಅವರ ಕಾರ್ಯದಿಂದ ನಾವು ಇಂದು ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿದ್ದೇವೆ. ನಮ್ಮ ಈ ಕೆಲಸ ಖಂಡಿತವಾಗಿಯೂ ವ್ಯವಸ್ಥೆಯನ್ನು ಬಲಪಡಿಸಿತು ಎಂದು ಹೇಳಿದ್ದಾರೆ.
ನಾವು ಕೆಲಸ ಮಾಡುವಾಗ ನಾವೇಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಂಡಿದ್ದೆವು. ದಿನ ಕೆಳಮಟ್ಟದ ಆರೋಗ್ಯ ಸಿಬ್ಬಂದಿಯಿಂದ ಹಿಡಿದು ಎಲ್ಲರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮಾಡುತ್ತಿದ್ದೇವು. ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ದಿನಲೂ ನಾನು ಮಾತನಾಡುತ್ತಿದ್ದೆ. ಮಾಹಿತಿ ಪಡೆಯುತ್ತಿದ್ದೆ. ನಾವು ಹೀಗೆ ಕೆಳಹಂತದಿಂದ ಮಾಹಿತಿ ಪಡೆದುಕೊಂಡಿದ್ದು, ಕೆಲಸ ಮಾಡಲು ನಮಗೆ ಸಲಭವಾಗತ್ತದೆ ಎಂದು ಶೈಲಜಾ ಅವರು ಅಭಿಪ್ರಾಯ ಪಟ್ಟಿದ್ದಾರೆ.
63 ವರ್ಷದ ಕೆಕೆ ಶೈಲಜಾ ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಈ ವಯಸ್ಸಿನಲ್ಲೂ ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಸಭೆ ಮತ್ತು ವಿಡಿಯೋ ಕಾನ್ಫೆರೆನ್ಸ್ ನಿರತರಾಗಿರುತ್ತಾರೆ. ಇದರ ಜೊತೆಗೆ ಮನೆಯಲ್ಲಿ ಇದ್ದರೆ ರಾತ್ರಿಯ ವೇಳೆಯೂ ಕೂಡ ಯಾವುದೇ ಕರೆ ಬರಲಿ ಮಾತನಾಡುತ್ತಾರೆ ಎಂದು ಅವರ ಮನೆಯವರು ಹೇಳಿದ್ದಾರೆ. 63ನೇ ವಯಸ್ಸಿನಲ್ಲೂ ತನ್ನ ರಾಜ್ಯಕ್ಕಾಗಿ ದುಡಿಯುತ್ತಿರುವ ಶೈಲಜಾ ಅವರ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಶೈಲಜಾ ಅವರ ಕಾರ್ಯಕ್ಷಮತೆಯಿಂದ ಇಂದು ಕೇರಳದ 8 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ. ಕೇರಳದಲ್ಲಿ ಕೊರೊನಾ ಹಾಟ್ಸ್ಟಾಟ್ ಆಗಿದ್ದ ಕಾಸರಗೋಡು, ಕೋಜಿಕೋಡ್, ಪಾಲಕ್ಕಾಡ್, ಅಲಾಪ್ಪುಜಾ, ಕೊಟ್ಟಾಯಂ, ಇಡುಕ್ಕಿ, ಪಥನಮತ್ತತ್ತ ಮತ್ತು ತಿರುವನಂತಪುರಂ ಜಿಲ್ಲೆಗಳು ಕೊರೊನಾ ರಹಿತ ಜಿಲ್ಲೆಗಳಾಗಿವೆ. ಜೊತೆಗೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದ್ದು, ಸೋಂಕಿನಿಂದ ಗಣಮುಖರಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.
ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡದಿಂದ ಇಲ್ಲಿಯವರೆಗೆ ಸುಮಾರು 512 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಮೂರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಈಗ ಕೇವಲ 20 ಜನರು ಕೊರೊನಾ ಚಿಕತ್ಸೆ ಪಡೆಯುತ್ತಿದ್ದು, ಇನ್ನುಳಿದ 488 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದಾರೆ. ಇಲ್ಲಿಯವರೆಗೂ ಸುಮಾರು 37,464 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ 36,630 ಸ್ಯಾಂಪಲ್ಸ್ ಗಳು ನೆಗೆಟಿವ್ ಬಂದಿವೆ.
ಇದರ ಜೊತೆಗೆ ಕೆಕೆ ಶೈಲಜಾ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.