ನವೆಂಬರ್ 11 ರಂದು ನಾಡಪ್ರಭು ಕೆಂಪೇಗೌಡ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೋವೊಂದನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೆಂಪೇಗೌಡರ ಜೀವನ ಸಾಧನೆಯನ್ನು ಈ ವಿಶೇಷ ವಿಡಿಯೋದ ಮೂಲಕ ತೋರಿಸಲಾಗುತ್ತಿದ್ದು, ಇದಕ್ಕೆ ಯಶ್ (Yash) ಅವರು ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆಯಷ್ಟೇ ‘ಗಂಧದ ಗುಡಿ’ ಡಾಕ್ಯುಡ್ರಾಮಾದ ನಿರ್ದೇಶಕ ಅಮೋಘ ವರ್ಷ (Amogha Varsha) ಮತ್ತು ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಡಬ್ಬಿಂಗ್ ಸ್ಟುಡಿಯೋದಲ್ಲಿ ಇಬ್ಬರು ಇದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲವು ಚರ್ಚೆಗೆ ಕಾರಣವಾಗಿತ್ತು. ಗಂಧದ ಗುಡಿ ಪ್ರಾಜೆಕ್ಟ್ ನಲ್ಲಿ ಯಶ್ ಏನಾದರೂ ಇನ್ವಾಲ್ ಆಗಿದ್ದಾರಾ ಎನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೇ, ಈ ಜೋಡಿ ಮತ್ತೇನಾದ್ರೂ ಕೆಲಸ ಮಾಡುತ್ತಿರಬಹುದಾ ಎಂದು ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ
ನಾಡಪ್ರಭು ಕೆಂಪೇಗೌಡ (Kampegowda) ಬೃಹತ್ ಪ್ರತಿಮೆಯ ಅನಾವರಣದ ಉಸ್ತುವಾರಿಯನ್ನು ಸಚಿವ ಅಶ್ವತ್ಥ್ ನಾರಾಯಣ್ ಅವರು ವಹಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಯಶ್ ಅವರು ಹಿನ್ನೆಲೆ ಧ್ವನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪೆಷಲ್ ವಿಡಿಯೋವನ್ನು ಮಾಡಲು ಅಮೋಘವರ್ಷ ಅವರು ಜವಾಬ್ದಾರಿ ತಗೆದುಕೊಂಡಿದ್ದು, ಆ ಸಾಕ್ಷ್ಯ ಚಿತ್ರಕ್ಕೆ ಯಶ್ ಧ್ವನಿ ನೀಡಿದ್ದಾರೆ ಎನ್ನುವುದು ಫೋಟೋ ಹಿಂದಿರುವ ಕಥೆಯಂತೆ.