ಶ್ರೀನಗರ: ಭಾರತ-ಪಾಕಿಸ್ತಾನದ ನಡುವಿನ ಕಾಶ್ಮೀರ ಸಮಸ್ಯೆಯ ವಿವಾದವನ್ನು ಮಾತುಕತೆಯ ಮೂಲಕ ಮಾತ್ರ ಪರಿಹರಿಸಿಕೊಳ್ಳಲು ಸಾಧ್ಯ ಎಂದು ಶ್ರೀನಗರ ಸಂಸದ ಹಾಗೂ ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಹಜ್ರತ್ಬಾಲ್ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಸೈನಿಕರು ಹಾಗೂ ಹಿಂಸೆಯ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾಶ್ಮೀರ ಭಾರತ-ಪಾಕಿಸ್ತಾನ ಎರಡು ದೇಶಗಳ ನಡುವಿನ ವಿವಾದ. ಈ ವಿವಾದ ಇನ್ನೂ ವಿಶ್ವಸಂಸ್ಥೆ ಅಂಗಳದಲ್ಲಿದೆ. ವಿಶ್ವಸಂಸ್ಥೆಯ ವೀಕ್ಷಕರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಭಾರತ ಕಾಶ್ಮೀರದ ಜನತೆ ಹಾಗೂ ಪಾಕಿಸ್ತಾನದ ಜನರೊಂದಿಗೆ ಮಾತನಾಡಬೇಕು. ಆಗ ಮಾತ್ರ ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದ ವಿವಾದ ಬಗೆ ಹರಿಸಲು ಜನರೊಂದಿಗೆ ಮಾತನಾಡುವುದನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಎನ್ಐಎ ಸೇರಿದಂತೆ ಮಿಲಿಟರಿ ಹಾಗೂ ಪರಸ್ಪರ ಶಕ್ತಿ ಪ್ರದರ್ಶನದಿಂದ ಏನೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.