ಕಾರವಾರ: ಬೆಳ್ಳಿ, ಬಂಗಾರ, ನಗನಾಣ್ಯಗಳ ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೋರ್ವ ಭೂಪ ಬೆಳಗ್ಗೆ ಮಾರಾಟಕ್ಕೆ ಇಳಿಸಿದ್ದ ಹಾಲು, ಮೊಸರು, ಮಜ್ಜಿಗೆಯನ್ನೂ ಕಳ್ಳತನ ಮಾಡಿದ್ದಾನೆ. ಈ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸ್ ಬಳಿಯ ಗೀತಾ ಕೊಲ್ಡ್ರಿಂಕ್ಸ್ ಅಂಗಡಿಯಲ್ಲಿ ಇಂತಹದೊಂದು ಕಳ್ಳತನ ನಡೆದಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ 4 ಗಂಟೆಗೆ ಬಂದು ಅಂಗಡಿ ಎದುರು ಇರಿಸಿದ್ದ ಹಾಲು, ಮೊಸರು, ಮಜ್ಜಿಗೆ ಪ್ಯಾಕೇಟ್ ಗಳನ್ನು ಕಳ್ಳತನ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಂದೆರಡು ಹಾಲಿನ ಪ್ಯಾಕೇಟ್ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತವೆ ಆದರೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಾಲು ಕದ್ದಿದ್ದಾರೆ ಎಂದು ಅಂಗಡಿ ಮಾಲೀಕ ಚಂದ್ರಕಾಂತ್ ಹೇಳುತ್ತಾರೆ. ಒಂದೇ ವಾರದಲ್ಲಿ ಎರಡು ಬಾರಿ ಕಳ್ಳತನವಾಗಿದೆ. ಕಳ್ಳತನ ನಡೆಸಿದ ವ್ಯಕ್ತಿ ಅಪರಿಚಿತನಾಗಿದ್ದು, ಈತನ ಮುಖಚಹರೆಯ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇಲ್ಲ. ಇದೀಗ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.