ಕಾರವಾರ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ ಕೆ. ಹರೀಶ್ ಕುಮಾರ್ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೊರೊನಾ ವೈರಸ್ ತಡೆಯಲು ಈಗಾಗಲೇ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.
ವಿದೇಶದಿಂದ ಹೆಚ್ಚಾಗಿ ಆಗಮಿಸಿದ ಭಟ್ಕಳದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಈಗಾಗಲೇ ಮೂರು ಪ್ರಕರಣಗಳಲ್ಲಿ ದೃಢಪಟ್ಟಿದೆ. ಆದರೆ ಈ ಸೋಂಕಿತರ ಸಂಪರ್ಕಕ್ಕೆ ಬಂದಂತಹ ಸುಮಾರು 40 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಭಟ್ಕಳದಲ್ಲಿ ವಿದೇಶದಿಂದ ಬಂದಂತವರ ಸಂಖ್ಯೆ ಹೆಚ್ಚಾಗಿ ಇರುವ ಕಾರಣ ಭಟ್ಕಳ ಪಟ್ಟಣ ಜಾಲಿ ಹೆಬಳೆ, ಮಾವಿನಕುರ್ವ ಮುಂಡಳ್ಳಿ ಯಲವಡಿಕವೂರು ಹಾಗೂ ಮುಠಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ತುರ್ತಾಗಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ ಎಂದು ಹೇಳಿದರು.
ಈಗಿರುವ ಲಾಕ್ ಡೌನ್ ಅನ್ನು ಕೆಲವರು ಪಾಲಿಸದ ಕಾರಣ ಅಂತವರಿಂದ ಸಮುದಾಯಕ್ಕೆ ಹರಡುವ ಆತಂಕದಿಂದಾಗಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾರೂ ಕೂಡ ಹೊರಗಡೆ ಓಡಾಡುವಂತಿಲ್ಲ. ಜನರಿಗೆ ಅವಶ್ಯವಿರುವ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಪೊಲೀಸರು ಭಟ್ಕಳದಲ್ಲಿ ತೀವ್ರ ನಿಗಾ ಇಡಲಿದ್ದಾರೆ. ಕೊರೊನಾ ಪೀಡಿತರನ್ನು ಕಾರವಾರದ ನೇವೆಲ್ ಬೇಸ್ ನ ಪತಂಜಲಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುವುದು ಎಂದರು.
ಭಟ್ಕಳ ಯುವಕನಿಗೆ ಫಾಸಿಟಿವ್:
ದುಬೈನಿಂದ ಬಂದ 22 ವರ್ಷದ ಯುವಕನ ರಕ್ತ ಮಾದರಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿರುವ ಲ್ಯಾಬ್ ಗೆ ಕಳುಹಿಸಲಾಗಿದ್ದು ಅಲ್ಲಿ ಫಾಸಿಟಿವ್ ಬಂದಿದ್ದು, ದೃಢಪಡಿಸಿಕೊಳ್ಳಲು ಪುಣೆಯ ಲ್ಯಾಬ್ ಗೆ ಕಳುಹಿಸಲಾಗಿತ್ತು. ಅಲ್ಲಿಯೂ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳ ಮೂಲದವರೂ ಸೇರಿ ಒಟ್ಟು ನಾಲ್ಕು ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ಮೂಲಗಳು ತಿಳಿಸಿದೆ.