ಮನೆ ದೇವ್ರು, ಹಾಲುಂಡ ತವರು, ಕರುಳಿನ ಕೂಗು ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕ ವೈಜಾಕ್ ರಾಜು ಅವರ ಪುತ್ರ ಕಾರ್ತಿಕ್ ರಾಜು (Karthik Raju) ‘ಅಥರ್ವ’ (Atharva) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಥರ್ವ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.
ನಮ್ಮ ತಂದೆ ವೈಜಾಕ್ ರಾಜು, ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬ ನನ್ನ ಬಹುದಿನ ಕನಸು ಈಗ ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜಕುಮಾರ್ ಅವರ ವೀರ ಕನ್ನಡಿಗ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಥರ್ವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮಹೇಶ್ ರೆಡ್ಡಿ (Mahesh Reddy) ಈ ಚಿತ್ರದ ನಿರ್ದೇಶಕರು. ನುರಿತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರೀಕರಣ ಮುಕ್ತಾಯವಾಗಿದೆ. ನವೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಚಿತ್ರದ ನಾಯಕ ಕಾರ್ತಿಕ್ ರಾಜು ತಿಳಿಸಿದರು.
ನಾನು ಮೂಲತಃ ಸಾಫ್ಟ್ವೇರ್ ಎಂಜಿನಿಯರ್. ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಚೊಚ್ಚಲ ಚಿತ್ರ. ಕ್ಲೂಸ್ ಡಿಪಾರ್ಟ್ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಹೆಚ್ಚಿನ ಸಿನಿಮಾಗಳು ಬಂದಿಲ್ಲ. ನಮ್ಮ ಚಿತ್ರದಲ್ಲಿ ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದೇವೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನೋಡಿ ಹಾರೈಸಿ ಎನ್ನುತ್ತಾರೆ ನಿರ್ದೇಶಕ ಮಹೇಶ್ ರೆಡ್ಡಿ.
ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ಸಿಮ್ರಾನ್ ಹೇಳಿದರು. ನಿರ್ಮಾಪಕ ಸುಭಾಷ್ ನೂತಲಪಾಟಿ , ಹಿರಿಯ ನಿರ್ಮಾಪಕ ವೈಜಾಕ್ ರಾಜು ಹಾಗೂ ವಿತರಕ ಮಾರ್ಸ್ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Web Stories