ಬೆಂಗಳೂರು: ಬಿಜೆಪಿ ಬಿಡುವಂಗಿಲ್ಲ, ಕಟ್ಟಿಕೊಳ್ಳುವಂಗಿಲ್ಲ ಎಂಬತಹ ಧರ್ಮಸಂಕಟದಲ್ಲಿ ಸಂಸದ ಬಚ್ಚೇಗೌಡ ಸಿಕ್ಕಿಹಾಕಿಕೊಂಡಿದ್ದಾರೆ. ತಮ್ಮ ಪಕ್ಷದ ಚಿಹ್ನೆ ಕಮಲ ಆದರೆ ಮಗ ಶರತ್ ಬಚ್ಚೇಗೌಡರ ಪಕ್ಷೇತರ ಚಿಹ್ನೆ ಕುಕ್ಕರ್ ಆಗಿರುವುದರಿಂದ ಬಚ್ಚೇಗೌಡರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಬರೀ 10 ದಿನ ಮಾತ್ರ ಉಳಿದಿದೆ. ಆದರೆ ಬಚ್ಚೆಗೌಡರು ಮಾತ್ರ ನಾಪತ್ತೆಯಾಗಿದ್ದಾರೆ. ಬಿಜೆಪಿ ಉಸ್ತುವಾರಿ ಹಾಕಿದ್ದರೂ ಕ್ಯಾರೇ ಎನ್ನದೇ ಪ್ರಚಾರಕ್ಕೂ ಹೋಗದೆ ಬಚ್ಚೇಗೌಡರು ಸೈಲೆಂಟ್ ಆಗಿದ್ದಾರೆ. ಒಬ್ಬ ಹಿರಿಯ ನಾಯಕ, ಪಕ್ಷದ ಸಂಸದ ಆಗಿದ್ದರೂ ಕೈಕಟ್ಟಿಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಈ ಮೂಲಕ ರಹಸ್ಯವಾಗಿ ರಾಜಕೀಯ ಚದುರಂಗದಾಟಕ್ಕೆ ಇಳಿದು ಬಿಟ್ಟರಾ ಬಚ್ಚೇಗೌಡರು ಎನ್ನುವ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಬಚ್ಚೇಗೌಡರ ಮನವೊಲಿಕೆ ಪ್ರಯತ್ನವನ್ನು ಸಿಎಂ ಯಡಿಯೂರಪ್ಪ ಕೈಬಿಟ್ಟಿದ್ದು, ಬಚ್ಚೇಗೌಡರ ಜತೆ ಬಿಜೆಪಿ ನಾಯಕರು ಕೂಡ ದೂರ ಸರಿದಿದ್ದಾರೆ. ಹೀಗಾಗಿ ಉಪಚುನಾವಣೆಗೂ ಮುನ್ನವೇ ಬಚ್ಚೇಗೌಡರ ಮೇಲೆ ಕ್ರಮನಾ ಅಥವಾ ಮುಗಿದ ಮೇಲೆ ಬಚ್ಚೇಗೌಡರ ಮೇಲೆ ಕ್ರಮನಾ ಎನ್ನುವ ಪ್ರಶ್ನೆ ಕಾಡುತ್ತಿದ್ದು, ಬಿಜೆಪಿಯ ಹೆಜ್ಜೆ, ಬಚ್ಚೇಗೌಡರ ರಹಸ್ಯ ಕುತೂಹಲ ಸೃಷ್ಟಿಸಿದೆ.