ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸರ್ಕಾರದ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಲಾಪಕ್ಕೆ ಅಡ್ಡಿಪಡಿಸಿದ ವಿಧಾನ ಪರಿಷತ್ನ 15 ಮಂದಿ ಕಾಂಗ್ರೆಸ್ ಸದಸ್ಯರನ್ನು ಸಭಾಪತಿ ಅಮಾನತುಗೊಳಿಸಿದ್ದಾರೆ.
ಎಸ್.ಆರ್.ಪಾಟೀಲ್, ಎಂ.ನಾರಾಯಣಸ್ವಾಮಿ, ಹರಿಪ್ರಸಾದ್, ಪ್ರತಾಪ್ಚಂದ್ರ ಶೆಟ್ಟಿ, ಸಿಎಂ ಇಬ್ರಾಹಿಂ, ನಜೀರ್ ಅಹಮದ್, ಆರ್ಬಿ ತಿಮ್ಮಾಪುರ, ಬಸವರಾಜ್ ಪಾಟೀಲ್ ಇಟಗಿ, ಯುಬಿ ವೆಂಕಟೇಶ್, ಅರವಿಂದಕುಮಾರ್, ಗೋಪಾಲಸ್ವಾಮಿ, ಸಿಎಂ ಲಿಂಗಪ್ಪ, ವೀಣಾ ಅಚ್ಚಯ್ಯ, ಪಿಆರ್ ರಮೇಶ್, ಹರೀಶ್ಕುಮಾರ್ ಅವರನ್ನು ಸಭಾಪತಿ ತೇಜಸ್ವಿನಿ ರಮೇಶ್ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ವೆಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ: ಜಾರಕಿಹೊಳಿಗೆ ತಿವಿದ ಸಿದ್ದರಾಮಯ್ಯ
ಜಮೀನು ಕಬಳಿಕೆ ಆರೋಪ ಪ್ರಕರಣದ ವಿಚಾರ ಹೈಕೋರ್ಟ್ನಲ್ಲಿದೆ. ಕೋರ್ಟ್ನಲ್ಲಿ ಪ್ರಕರಣ ಇರುವ ಕಾರಣ ಚರ್ಚೆ ಬೇಡ ಎಂದು ಸಭಾಪತಿ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದನದ ಬಾವಿಗಿಳಿದು ಧರಣಿ ನಡೆಸಿದರು.
ಕಾನೂನು ಸಚಿವರು ನಿಯಮ ಹೇಳಿದ್ದಾರೆ. ಹೀಗಾಗಿ ನಾನು ನಿಲುವಳಿ ಸೂಚನೆಗೆ ಅವಕಾಶ ನೀಡಿಲ್ಲ. ಈಗ ಆ ಚರ್ಚೆ ಬೇಡ ಎಂದು ಸಭಾಪತಿ ಹೊರಟ್ಟಿ ತಿಳಿಸಿದರು. ಈ ವೇಳೆ ಸಚಿವರಾದ ಸೋಮಣ್ಣ, ಮಾಧುಸ್ವಾಮಿ ಅವರು ಕಾಂಗ್ರೆಸ್ ಸದಸ್ಯರ ವಿರುದ್ಧ ಹರಿಹಾಯ್ದರು. ಸಭಾಪತಿ ರೂಲಿಂಗ್ ಮಾಡಿದ ಮೇಲೆ ಯಾರೂ ಒಳಗೆ ಇರುವ ಹಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪೊಲೀಸರಿಗೆ ಫ್ರೀ ಹ್ಯಾಂಡ್, ಮಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಭಂಗ ಬಂದ್ರೆ ಕ್ರಮ: ಆರಗ ಜ್ಞಾನೇಂದ್ರ
ಧರಣಿ ನಿಲ್ಲಿಸದ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿ ಸಭಾಪತಿ ಹೊರಟ್ಟಿ ಆದೇಶ ಹೊರಡಿಸಿದರು. ಅಮಾನತುಗೊಳಿಸಿದರೂ ಕಾಂಗ್ರೆಸ್ ಸದಸ್ಯರು ಸದನದಲ್ಲೇ ಧರಣಿ ಮುಂದುವರಿಸಿದರು. ಗಲಾಟೆ ಹೆಚ್ಚಾದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.