ಲಕ್ನೋ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ನಿರ್ಮಾಣದಲ್ಲಿ ಕರ್ನಾಟಕದವರ (Karnataka) ಕೊಡುಗೆಯೂ ಹೆಚ್ಚಿರುವುದು ಹೆಮ್ಮೆಯ ವಿಷಯವಾಗಿದೆ. ಅದರಲ್ಲೂ ಬಾಲರಾಮನ ವಿಗ್ರಹವನ್ನು ನಿರ್ಮಿಸಲು ರಾಜ್ಯದ ಕಾರ್ಕಳ (Karkala) ಹಾಗೂ ಹೆಚ್.ಡಿ. ಕೋಟೆಯಿಂದ (HD Kote) ತರಿಸಲಾದ ಕಪ್ಪು ಕಲ್ಲನ್ನು ಬಳಸಲು ನಿರ್ಧರಿಸುವುದು ವಿಶೇಷವಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ಸೋವಾರದಿಂದ 2 ದಿನಗಳ ಸಭೆ ಸೇರಿದ್ದು, ಅಲ್ಲಿ ವಿಗ್ರಹಕ್ಕೆ ಅಗತ್ಯವಾದ ಶಿಲೆ ಬಳಕೆ, ವಿಗ್ರಹದ ಸ್ವರೂಪ, ಶಿಲ್ಪಿ ಆಯ್ಕೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ನೂತನ ರಾಮನ ವಿಗ್ರಹ ನಿರ್ಮಾಣದ ಹೊಣೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ.
ಕಪ್ಪು ಶಿಲೆ: ಈಗಾಗಲೇ ರಾಮನ ವಿಗ್ರಹ ನಿರ್ಮಾಣಕ್ಕೆ ಕರ್ನಾಟಕದ ಕಾರ್ಕಳ, ಮೈಸೂರಿನ ಹೆಚ್.ಡಿ ಕೋಟೆ ಸೇರಿದಂತೆ ದೇಶ – ವಿದೇಶಗಳ ವಿವಿಧ ಭಾಗಗಳಿಂದ ಶಿಲೆಗಳನ್ನು ಆರಿಸಲಾಗಿತ್ತು. ಈ ಪೈಕಿ ಕಾರ್ಕಳದ ಕರಿಕಲ್ಲು ಅಂತಾರಾಷ್ಟ್ರೀಯ ಮಟ್ಟದಲ್ಲೇ ಭಾರಿ ಪ್ರಸಿದ್ಧಿ ಪಡೆದಿದೆ. ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಭಾರಿ ಜನಪ್ರಿಯ.
ಈ ರೀತಿಯ ಹಿನ್ನೆಲೆಯಿರುವ ಕಾರ್ಕಳದ ಹಾಗೂ ಹೆಚ್ಡಿ ಕೋಟೆಯ ಕಲ್ಲನ್ನು ರಾಮನ ವಿಗ್ರಹ ನಿರ್ಮಾಣಕ್ಕೆ ಬಳಸಲು ಅಂತಿಮವಾಗಿ ನಿರ್ಧರಿಸಲಾಗಿದೆ. ಈ ಪೈಕಿ ಯಾವ ಶಿಲೆ ಬೇಕು ಎಂಬುದನ್ನು ಸ್ವತಃ ಶಿಲ್ಪಿಯ ವಿವೇಚನೆಗೆ ಬಿಡಲಾಗಿದೆ.
ಇದುವರೆಗೂ ಅಯೋಧ್ಯೆಯಲ್ಲಿ ಇದ್ದ ಬಾಲರಾಮನ ವಿಗ್ರಹಕ್ಕಿಂತ ಸಂಪೂರ್ಣ ವಿಭಿನ್ನ ರೀತಿಯ ನೂತನ ವಿಗ್ರಹವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ರಾಮನ ಮೂರ್ತಿ 5ನೇ ವಯಸ್ಸಿನ ಅವತಾರದಲ್ಲಿ ಇರುವ ಬಾಲಕನ ರೀತಿ ನಿರ್ಮಾಣವಾಗಲಿದೆ. ಈ ವಿಗ್ರಹವು 5 ಅಡಿ ಎತ್ತರವಿರಲಿದೆ. ಕೈಯಲ್ಲಿ ಬಿಲ್ಲು ಹಾಗೂ ಬಾಣ ಹಿಡಿದ ಮಾದರಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲು ಸೂಚಿಸಲಾಗಿದೆ ಎಂದು ಟ್ರಸ್ಟ್ ನಿರ್ಧರಿಸಿದೆ. ಇದನ್ನೂ ಓದಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್ ಶಾಕ್
ಮೈಸೂರಿನ ಅರುಣ್ ಯೋಗಿರಾಜ್ಗೆ ಜವಾಬ್ದಾರಿ: ಬಾಲರಾಮನ ಮೂರ್ತಿ ಕೆತ್ತುವ ಹೊಣೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಈ ಹಿಂದೆ ಅರುಣ್ ಯೋಗಿರಾಜ್ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾಚಾರ್ಯರು ಹಾಗೂ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೂಡಾ ಕೆತ್ತುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಫೈಟ್ನಲ್ಲಿ ಗೆದ್ದ ಪರಮೇಶ್ವರ್!