– 30 ಸಾವಿರ ಕೋಟಿ ಹಣ ಪಾವತಿಯಾಗ್ಬೇಕು: ಗುತ್ತಿಗೆದಾರರ ಸಂಘದಿಂದ ಪತ್ರ
ಬೆಂಗಳೂರು: 60% ಕಮಿಷನ್ ಆರೋಪ ಹೊತ್ತಲ್ಲೇ ಸರ್ಕಾರದ ಆರು ಸಚಿವರಿಗೆ ರಾಜ್ಯ ಗುತ್ತಿಗೆದಾರರ ಸಂಘ (Karnataka State Contractors Association) ಪತ್ರ ಬರೆದಿದೆ.
ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಹೆಚ್ಸಿ ಮಹಾದೇವಪ್ಪ, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ, ಬೋಸರಾಜ್ಗೆ ಪತ್ರ ಬರೆಯಲಾಗಿದೆ.
ಬಾಕಿ ಹಣ ಬಿಡುಗಡೆ ಆಗದಿದ್ದರೆ ದೊಡ್ಡ ಹೋರಾಟ ಮಾಡುವುದಾಗಿ ಗುತ್ತಿಗೆದಾರರು ಸರ್ಕಾರದ ಸಚಿವರುಗೆ ಪತ್ರ ಮೂಲಕ ಎಚ್ಚರಿಸಿದ್ದಾರೆ. ಹಣ ಪಾವತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಉಲ್ಲೇಖಿಸಲಾಗಿದೆ.
ಹಣ ಪಾವತಿ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳು ಕೊಡುತ್ತಿರುವ ಉತ್ತರಕ್ಕೆ ಗುತ್ತಿಗೆದಾರರ ಸಂಘ ಗರಂ ಆಗಿದೆ. ಹಣ ಪಾವತಿ ವಿಚಾರ ಆದ್ರೆ ಮಂತ್ರಿಗಳನ್ನೇ ಭೇಟಿ ಮಾಡಿ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಲಾಗಿದೆ.
ಸಚಿವರು ಕೊಟ್ಟ ಪಟ್ಟಿಯ ಪ್ರಕಾರ ಹಣ ಬಿಡುಗಡೆ ಆಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜೇಷ್ಠತೆ ಕಡೆಗಣಿಸಿ ಹಣ ಬಿಡುಗಡೆ ಮಾಡಲು ಸಚಿವರು ಸೂಚಿಸಿದ್ದಾರೆ. ಜೇಷ್ಠತೆ ಆಧರಿಸಿ ಹಣ ಪಾವತಿ ಆದರೆ ಎಲ್ಲರಿಗೂ ಅನ್ಯಾಯ ಆಗುತ್ತೆ ಅಂತಾ ಪತ್ರದಲ್ಲಿ ಹೇಳಿದ್ದಾರೆ.
ಸುಮಾರು 30 ಸಾವಿರ ಕೋಟಿಯಷ್ಟು ಹಣ ಪಾವತಿಯಾಗಬೇಕಿದೆ. ಬಾಕಿ ಹಣ ಬಿಡುಗಡೆ ಆಗದಿದ್ದರೆ ದೊಡ್ಡ ಹೋರಾಟ ಮಾಡುತ್ತೇವೆ. 7 ದಿನಗಳ ಒಳಗೆ ಗುತ್ತಿಗೆದಾರರ ಸಂಘದ ಸಭೆ ಕರೆದು ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತರಲು ತಯಾರಿ ಮಾಡಿದ್ದೇವೆಂದು ಗುತ್ತಿಗೆದಾರರ ಸಂಘ ಎಚ್ಚರಿಸಿದೆ.