ಬೆಳಗಾವಿ: ಕಿರಾಣಿ ಅಂಗಡಿಯಿಂದ ಜೀವನ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಅವರ ಪುತ್ರಿಯೊಬ್ಬಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಪ್ರತಿಶತ ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ನಿವಾಸಿಗಳಾದ ಮಹಾಂತೇಶ ರಾಯರ್ ಹಾಗೂ ಭಾರತೀ ರಾಯರ್ ಅವರ ಪುತ್ರಿ ಸಹನಾ ಮಹಾಂತೇಶ ರಾಯರ್ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಔಟ್ ಆಫ್ ಔಟ್ – ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ
ಸತ್ತಿಗೇರಿ ಗ್ರಾಮದ ಸಹನಾ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಈಕೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಸಹನಾ ತಂದೆ ಜೀವನ ನಿರ್ವಹಣೆಗಾಗಿ ಕಿರಾಣಿ ಅಂಗಡಿ ನಡೆಸಿ ಕುಟುಂಬ ಸಾಗಿಸುತ್ತಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸಹನಾ, ಕೋವಿಡ್-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್ಲೈನ್ ತರಗತಿಗೆ ಹಾಜರಾಗಲು ನೆಟ್ವರ್ಕ್ ಸಮಸ್ಯೆಯೂ ಕಾಡುತಲಿತ್ತು. ಆದರೂ, ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ನನ್ನ ಶಿಕ್ಷಕರು ಮತ್ತು ಪೋಷಕರು ಸಾಕಷ್ಟು ಪ್ರೋತ್ಸಾಹ ನೀಡಿದರು. ಅವರ ನಿರೀಕ್ಷೆಯಂತೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
9ನೇ ತರಗತಿ ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಪಾಠವನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದೆ. ನಿತ್ಯ ಮನೆಗೆಲಸ ಮಾಡುತ್ತಲೇ 8 ತಾಸು ಓದುತ್ತಿದ್ದೆ. ಸತತ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ ಎಂದು ಸಂತಸ ಹಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಎಸ್ಎಸ್ಎಲ್ಸಿಯಲ್ಲಿ ಔಟ್ ಆಫ್ ಔಟ್ ತೆಗೆದ ಬೆಂಗಳೂರಿನ ವಿದ್ಯಾರ್ಥಿಗಳು
ಬಾಗಲಕೋಟೆಗೆ ಇಂದಿರಾ ಟಾಪ್: ಬಾಗಲಕೋಟೆ ತಾಲೂಕಿನ ಚಿಕ್ಕಸಂಶಿ ಗ್ರಾಮದ ವಿದ್ಯಾರ್ಥಿನಿ ಇಂದಿರಾ ನ್ಯಾಮಗೌಡರ್ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮಂಗಳೂರು ಜಿಲ್ಲೆಯ ಮೂಡಬಿದರೆ ಆಳ್ವಾಸ್ನ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲಾ ಶಿಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.