ಬೆಂಗಳೂರು: ಒಂದು ಕಡೆ ಹಿಜಬ್ ವಿವಾದ ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಕಾಂಗ್ರೆಸ್, ಬಿಜೆಪಿ ಮಧ್ಯೆ ಧ್ವಜ ಫೈಟ್ ಜೋರಾಗಿದೆ.
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ, ಭಗವಾಧ್ವಜ ಹಾರಿಸಲಾಗಿದೆ ಎಂದು ನಿನ್ನೆ ಡಿಕೆಶಿ ಕೊಟ್ಟ ಹೇಳಿಕೆಗೆ ಬಿಜೆಪಿ ತಿರುಗೇಟು ಕೊಟ್ಟಿದೆ. ಡಿಕೆಶಿಗೆ ಮಾಹಿತಿ ಕೊರತೆ ಇದೆ ಎಂದು ಗೃಹ ಸಚಿವರು ಹೇಳಿದ್ರೆ, ಧ್ವಜವನ್ನು ಯಾರು ಇಳಿಸಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಚಿವ ಈಶ್ವರಪ್ಪ, ತ್ರಿವರ್ಣ ಧ್ವಜ ಇಳಿಸಿದ್ದಾರೆ ಅನ್ನೋದೆಲ್ಲಾ ಸುಳ್ಳು. ಆದರೆ ಕೇಸರಿ ಧ್ವಜವನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಹಾರಿಸುತ್ತೇವೆ. ಇವತ್ತಲ್ಲ ನಾಳೆ ಕೆಂಪು ಕೋಟೆ ಮೇಲೆ ಹಾರಿಸ್ತೀವಿ. ಮುಂದಿನ ದಿನಗಳಲ್ಲಿ ಕೇಸರಿಯೇ ರಾಷ್ಟ್ರ ಧ್ವಜ ಆಗಬಹುದು ಎಂದಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ತಮಿಳುನಾಡಿನಿಂದ ಪ್ರಶಸ್ತಿ ಪ್ರಕಟ
ಈ ಮಧ್ಯೆ, ಬಿಜೆಪಿ ವಿರುದ್ಧ ಡಿಕೆಶಿ ಇನ್ನೊಂದು ಗಂಭೀರ ಆರೋಪ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿಶಲ್ಯ, ಪೇಟಾಗಳನ್ನು ಬಿಜೆಪಿ ನಾಯಕರೇ ಹಂಚಿಕೆ ಮಾಡಿ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಸೂರತ್ನಲ್ಲಿ 50 ಲಕ್ಷ ಶಾಲುಗಳನ್ನು ಆರ್ಡರ್ ಮಾಡಿರೋದು ನನಗೆ ಗೊತ್ತಿದೆ. ಒಬ್ಬ ಸಚಿವರ ಮಗ ಶಿವಮೊಗ್ಗದಲ್ಲಿ ಕೇಸರಿ ಶಾಲುಗಳನ್ನು, ಟರ್ಬನ್ಗಳನ್ನು ಮೂಟೆಗಟ್ಟಲೇ ಹಂಚಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ, ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ: ಖುಷ್ಬೂ
ಡಿಕೆಶಿ ಆರೋಪಕ್ಕೆ ಈಶ್ವರಪ್ಪ, ಕೇಸರಿ ಶಾಲು ಕೊಟ್ಟರೆ ಏನು ತಪ್ಪು ಎಂದು ಪ್ರಶ್ನೆ ಮಾಡಿದ್ದಾರೆ. ಇತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಷ್ಟ್ರಧ್ವಜವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ರಾಷ್ಟ್ರಧ್ವಜವನ್ನು ನಾಶ ಮಾಡಿದ್ರೆ ದೇಶವನ್ನೇ ನಾಶ ಮಾಡಿದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.