ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಮೂಲಕ ನಾಳೆ ನಡೆಯಲಿರುವ ನಾಮಪತ್ರ ಸಲ್ಲಿಕೆ ಕುತೂಹಲಕ್ಕೆ ತೆರೆ ಎಳೆದಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?
ಹಲವು ದಿನಗಳಿಂದ ಕಾಂಗ್ರೆಸ್ನ ಹಿರಿಯ ನಾಯಕರು ಟಿಕೆಟ್ಗಾಗಿ ಹೈಕಮಾಂಡ್ ಕದತಟ್ಟಿದ್ದರು. ಆದರೆ ಹೈಕಮಾಂಡ್ ಪಕ್ಷ ನಿಷ್ಠರನ್ನು ಹುಡುಕಿ ಮಣೆ ಹಾಕಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಹೈಕಮಾಂಡ್ ಯಾರ ಪ್ರಯತ್ನಕ್ಕೂ ಕೇರ್ ಮಾಡದೇ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಜಾತಿ ಸಮೀಕರಣದಲ್ಲಿ ಯಾದವ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ನಾಗರಾಜ್ ಯಾದವ್ಗೆ ಅವಕಾಶ ನೀಡಿದೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಮೇಶ್ ಜಾರಕಿಹೊಳಿ ಬೆಂಬಲಿಗ ಸಹಾ ಆಗಿರುವ ನಾಗರಾಜ್ ಯಾದವ್ಗೆ ಅವಕಾಶ ಸಿಕ್ಕಿದೆ. ಅಲ್ಲದೇ ಯಾದವ್ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ
ಈ ಹಿಂದೆ ಒಂದು ಬಾರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಪರಿಷತ್ಗೆ ನಾಮನಿರ್ದೇಶನಗೊಂಡಿದ್ದ ಅಬ್ದುಲ್ ಜಬ್ಬಾರ್ಗೆ ಹೈಕಮಾಂಡ್ ಮಣೆ ಹಾಕಿದೆ. ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜಾಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.