ಮೈಸೂರು: ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ಮುಂದೊಂದು ದಿನ ದೇಶವನ್ನೇ ತುಂಡರಿಸುತ್ತಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಾಪ್ ಸಿಂಹ ಒಬ್ಬ ಮೂರ್ಖ ಎಂಬ ಯು.ಟಿ.ಖಾದರ್ ಹೇಳಿಕೆಗೆ ಸಂಸದರು ತಿರುಗೇಟು ನೀಡಿದರು. ಉಳ್ಳಾಲದ ಮುಲ್ಲಾ ಯು.ಟಿ ಖಾದರ್ ನಿಜವಾದ ಮೂರ್ಖ. ಉಳ್ಳಾಲದ ಮುಲ್ಲಾ ಖಾದರ್ಗೆ ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ. ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತ ಗೊತ್ತಿಲ್ವ. ನಿಜವಾದ ಮೂರ್ಖತನ ಪ್ರದರ್ಶನ ಮಾಡ್ತಿರೋದು ಖಾದರ್ ಎಂದು ಕಿಡಿಕಾರಿದರು.
ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯವಾರದು. ಇವತ್ತು ಹಿಜಾಬ್ ಕೇಳ್ತಾರೆ, ನಾಳೆ ಬುರ್ಕಾ ಹಾಕೊಂಡು ಬರುತ್ತಾರೆ. ಶುಕ್ರವಾರ ಬಂದ್ರೆ ಶಾಲೆಯಲ್ಲೇ ನಮಾಜ್ ಮಾಡ್ತೀವಿ ಅಂತಾರೆ. ಕ್ಲಾಸ್ ರೂಂನಲ್ಲಿ ಪ್ರೇಯರ್ ಹಾಲ್ ಕಟ್ಟಿಸಿಕೊಡಿ ಅಂತಾರೆ. ಮುಂದೊಂದು ದಿನ ದೇಶ ತುಂಡು ಮಾಡಿ ಅಂತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ
70 ವರ್ಷಗಳ ಹಿಂದೆ ಇವರೆಲ್ಲ ಇದನ್ನೇ ಮಾಡಿದ್ದು. ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ದೇಶವನ್ನ ತುಂಡರಿಸುತ್ತಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ. ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ. ಆ ಜಾತಿ, ಈ ಜಾತಿ, ಆ ಧರ್ಮ, ಈ ಧರ್ಮ ಅಂತ ಭೇದಭಾವ ಇಲ್ಲದೆ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸಮವಸ್ತ್ರ ಜಾರಿಗೊಳಿಸಿವೆ. ಇದನ್ನ ಅರ್ಥ ಮಾಡಿಕೊಳ್ಳುವ ಕನಿಷ್ಠ ಜ್ಞಾನ ಇಲ್ಲ ಅಂದ್ರೆ ಅದು ಖಾದರ್, ಕಾಂಗ್ರೆಸ್ ಸಮಸ್ಯೆ. ಅದು ನಮ್ಮ ಸಮಸ್ಯೆ ಅಲ್ಲ ಎಂದು ಖಾದರ್ ವಿರುದ್ದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು