ಆನೆ ಹಾವಳಿ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆ – ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆಯನ್ನೇ ಕೈಬಿಟ್ಟ ಸರ್ಕಾರ

Public TV
2 Min Read
Elephants selfies

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಅದರಲ್ಲೂ ಆನೆ ಹಾವಳಿ ಕೂಡ ಹೆಚ್ಚಾಗಿದೆ. ಇದನ್ನ ಪರಿಹರಿಸಲು ಸರ್ಕಾರ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದೆ.‌ ಆದರೆ ಅತಿ ಹೆಚ್ಚು ಆನೆಗಳಿರುವ ಚಾಮರಾಜನಗರ (Chamarajanagar) ಜಿಲ್ಲೆಯನ್ನೇ ಟಾಸ್ಕ್ ಫೋರ್ಸ್‌ನಿಂದ ಕೈಬಿಟ್ಟಿದೆ.

ಚಾಮರಾಜನಗರ ಶೇ.50% ರಷ್ಟು ಅರಣ್ಯದಿಂದಲೇ ಕೂಡಿರುವ ಜಿಲ್ಲೆ.‌ ಅದರಲ್ಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಆನೆಗಳು ಜಿಲ್ಲೆ ಕಾಡಿನಲ್ಲಿ ವಾಸಿಸುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ‌ ನಿರಂತರವಾಗಿ ವನ್ಯಜೀವಿ ಮಾನವ ಸಂಘರ್ಷ ಉಂಟಾಗುತ್ತಿದೆ. ಅದರಲ್ಲೂ ಆನೆಗಳ ಹಾವಳಿಯಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಇದೇ ರೀತಿಯ ಸಮಸ್ಯೆ ಬೇರೆ ಜಿಲ್ಲೆಗಳಲ್ಲೂ ಇದೆ. ಇದನ್ನ ಮನಗಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಪರಿಹಾರ ಮಾಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನ ರಚನೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ

Bommai 2

ಕಾರ್ಯಪಡೆಯಲ್ಲಿ ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಒಳಗೊಂಡಿದೆ. ಆದರೆ ಸರ್ಕಾರ ಈ ಟಾಸ್ಕ್ ಫೋರ್ಸ್‌ನಲ್ಲಿ ಚಾಮರಾಜನಗರ ಜಿಲ್ಲೆಯನ್ನೇ ಕೈಬಿಟ್ಟಿದೆ. ಇದರಿಂದ ಜಿಲ್ಲೆಯ ಶಾಸಕರು ಈ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಪ್ರಮುಖವಾಗಿ ಚಾಮರಾಜನಗರ ಜಿಲ್ಲೆಯ ಹನೂರು ಮಹದೇಶ್ವರ ಬೆಟ್ಟದ ಭಾಗದಲ್ಲಿ ಸಾಕಷ್ಟು ಆನೆ ಹಾವಳಿ ಇದೆ. ಆನೆ ಹಾವಳಿಯಿಂದ ಜೀವ ಹಾನಿ, ಜಮೀನಿನಲ್ಲಿ ಬೆಳೆಯಾನಿಯಂತಹ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ‌ಹಾನಿ ಸಮಸ್ಯೆ ಇರುವ ಕಾರಣ ರೇಡಿಯೋ ಕಾಲರ್‌ಗಳನ್ನು ಮಹದೇಶ್ವರ ಬೆಟ್ಟ ಭಾಗದಲ್ಲಿ ಆನೆಗಳಿಗೆ ಹಾಕಲಾಗಿದೆ.‌ ಇಷ್ಟೊಂದು ಸಮಸ್ಯೆ ಇದ್ದರೂ ಸರ್ಕಾರ ಜಿಲ್ಲೆಯನ್ನ ಟಾಸ್ಕ್ ಫೋರ್ಸ್‌ನಿಂದ ಕೈಬಿಟ್ಟಿರುವುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಅಷ್ಟೇ ಅಲ್ಲದೇ ಟಾಸ್ಕ್‌ ಫೋರ್ಸ್‌ನಲ್ಲಿರುವ ಅಧಿಕಾರಿಗಳ ಬಗ್ಗೆಯು ವನ್ಯಜೀವಿ ತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಎಂಟು ಜನರ ಕಾರ್ಯಪಡೆಯಲ್ಲಿರುವ ಅಧಿಕಾರಿಗಳಿಗೆ ಆನೆ-ಮಾನವ ಸಂಘರ್ಷ ತಡೆಗಟ್ಟಬೇಕಾದ ಅನುಭವವೇ ಇಲ್ಲವಂತೆ. ಇಲ್ಲಿರುವ ಅರ್ಧಕ್ಕಿಂತ ಹೆಚ್ಚು ಅಧಿಕಾರಿಗಳು ಸಾಮಾಜಿಕ ಅರಣ್ಯದಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಆದರೆ ಸಂಘರ್ಷ ತಡೆಗಟ್ಟಲು ಏನು ಮಾಡಬೇಕು ಎಂಬ ಅನುಭವ ಇಲ್ಲ. ಟಾಸ್ಕ್ ಫೋರ್ಸ್‌ ಮಾಡಿರುವುದು ಒಳ್ಳೆಯ ನಿರ್ಧಾರ‌. ಆದರೆ ಅದನ್ನ ಸರಿಯಾಗಿ ಮಾಡಿದರೆ ಒಳ್ಳೆಯದಾಗುತ್ತೆ ಅನ್ನೋ ಅಭಿಪ್ರಾಯ ಕೇಳಿಬರುತ್ತಿದೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕಿರುವ 4% ಮೀಸಲಾತಿಯನ್ನು 12% ಅಥವಾ 15%ಕ್ಕೆ ಏರಿಸಿ – ಸರ್ಕಾರಕ್ಕೆ ಡೆಡ್‌ಲೈನ್

ಸರ್ಕಾರ ಜನರ ಒಳಿತಿಗೆ ಒಂದೊಂದೇ ಯೋಜನೆ ರೂಪಿಸುತ್ತಿದೆ. ಒಂದು ಕಡೆ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರ ಸಿಗುತ್ತಿಲ್ಲ ಎನ್ನುವ ಕೂಗಿದೆ. ಯೋಜನೆಯನ್ನೇ ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ ಅನ್ನೋದು ಇಂತಹ ತಪ್ಪುಗಳಿಂದಲೇ ಸಾಬೀತಾಗುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಟಾಸ್ಕ್ ಫೋರ್ಸ್‌ನಲ್ಲಿ ಚಾಮರಾಜನಗರಕ್ಕೂ ಸ್ಥಾನ ಕಲ್ಪಿಸಲಿ ಎಂದು ಶಾಸಕರು ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *