ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly election) ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದರೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜಯನಗರದಲ್ಲಿ (Jayanagara) ಗೊಂದಲ ಉಂಟಾಗಿದೆ.
ಮೊದಲ ಬಾರಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ನ ಸೌಮ್ಯಾ ರೆಡ್ಡಿ (Sowmya Reddy) ಬಿಜೆಪಿಯ ರಾಮಮೂರ್ತಿ (Ramamurthy) ವಿರುದ್ಧ 119 ಮತಗಳ ಅಂತರದ ಜಯಗಳಿಸಿದ್ದರು. ಆದರೆ ಈ ಮತ ಎಣಿಕೆ ಸರಿಯಾಗಿ ನಡೆದಿಲ್ಲ ಎಂದು ಬಿಜೆಪಿ ನಾಯಕರು ದೂರು ನೀಡಿದ ಹಿನ್ನಡೆಯಲ್ಲಿ ಮರು ಎಣಿಕೆ ನಡೆದಿದೆ. ಮರು ಮತ ಎಣಿಕೆ ನಡೆದ ಬಳಿಕ ರಾಮಮೂರ್ತಿ 17 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಫಲಿತಾಂಶವನ್ನು ಪ್ರಕಟ ಮಾಡದಂತೆ ಆಗ್ರಹಿಸಿದ್ದಾರೆ.
ಸ್ಥಳದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಾದಂತೆ ಮತ ಎಣಿಕೆ ನಡೆದ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್ಆರ್ಪಿ, ಪೊಲೀಸರ ನಿಯೋಜನೆ ಆಡಲಾಗಿದೆ. ಸದ್ಯ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.
ಪದ್ಮನಾಭನಗರದ ಶಾಸಕ ಆರ್ ಆಶೋಕ್, ಸಂಸದ ತೇಜಸ್ವಿ ಸೂರ್ಯ ಕೂಡ ಪ್ರತಿಷ್ಠೆಯಾಗಿ ಈ ಕ್ಷೇತ್ರವನ್ನು ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ ಡಿಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ ಸ್ಥಳಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ನಾಯಕರು ಈಗ ಕಾನೂನು ತಜ್ಞರೊಂದಿಗೆ ಸ್ಥಳದಿಂದಲೇ ಸಮಾಲೋಚನೆ ನಡೆಸುತ್ತಿದ್ದಾರೆ.