ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Assembly Election Result) ಶನಿವಾರ ಹೊರಬೀಳುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಹೌದು. ಚುನಾವಣಾ ಫಲಿತಾಂಶ(Election Result) ಕ್ಕೆ 1,500 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರು ನಗರದ ನಾಲ್ಕು ಮತ ಎಣಿಕೆ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗುತ್ತಿದೆ. ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜು, ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿಯ ಬಿಎಂಎಸ್ ಕಾಲೇಜು ಹಾಗೂ ತಿಲಕ್ ನಗರದ ಎಸ್ಎಸ್ಎಂಆರ್ ವಿ ಕಾಲೇಜುಗಳಿಗೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿಗೆ 2 ಡಿಸಿಪಿ, 4 ಎಸಿಪಿ, 20 ಇನ್ಸ್ ಪೆಕ್ಟರ್, 72 ಪಿಎಸ್ಐ ಸೇರಿ 506 ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಬಸವನಗುಡಿಯ ಬಿಎಂಎಸ್ ಕಾಲೇಜಿಗೆ ಇಬ್ಬರು ಡಿಸಿಪಿ, 4 ಎಸಿಪಿ, 18 ಇನ್ಸ್ ಪೆಕ್ಟರ್, 40 ಪಿಎಸ್ಐ ಸೇರಿ 275 ಸಿಬ್ಬಂದಿ, ತಿಲಕ್ ನಗರದ ಎಸ್ಎಸ್ಎಂಆರ್ ವಿ ಕಾಲೇಜಿಗೆ ಇಬ್ಬರು ಡಿಸಿಪಿ, 5 ಎಸಿಪಿ, 10 ಇನ್ಸ್ ಪೆಕ್ಟರ್, 14 ಪಿಎಸ್ಐ ಸೇರಿ 399 ಪೊಲೀಸ್ ಸಿಬ್ಬಂದಿ ಹಾಗೂ ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿಗೆ ಇಬ್ಬರು ಡಿಸಿಪಿ, 3 ಎಸಿಪಿ, 6 ಇನ್ಸ್ ಪೆಕ್ಟರ್, 15 ಪಿಎಸ್ಐ ಸೇರಿ 214 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಒಟ್ಟಿನಲ್ಲಿ ಬೆಳಗ್ಗೆ 5 ಗಂಟೆಗೆ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ ಎಣಿಕೆ ಕೇಂದ್ರದ ಬಳಿ ಹಾಜರಿರಲು ಸೂಚನೆ ನೀಡಲಾಗಿದೆ. ಅಲ್ಲದೆ ಸಂಬಂಧಪಟ್ಟ ಡಿಸಿಪಿಗಳ ಬಳಿ ರಿಪೋರ್ಟ್ ಮಾಡಿಕೊಳ್ಳಲು ಕೂಡ ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಷೇಧಾಜ್ಞೆ ಜಾರಿ
ಸ್ಥಳೀಯ ಪೊಲೀಸರಲ್ಲದೆ ಕೇಂದ್ರದ ತುಕಡಿಗಳು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರಗಳ ಬಳಿ ಕೆಎಸ್ಆರ್ಪಿ, ಸಿಎಆರ್, ಡಿಸ್ವ್ಯಾಟ್, ವಾಟರ್ ಜೆಟ್, ಖಾಲಿ ವಾಹನಗಳನ್ನು ನಿಯೋಜಿಸಲಾಗಿದೆ. ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಕ್ತ ಬಂದೋಬಸ್ತ್ ಮಾಡಿ ಉಸ್ತುವಾರಿ ವಹಿಸಿದ್ದಾರೆ.