ಬೆಂಗಳೂರು: ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಬಿಜೆಪಿ ಹೈಕಮಾಂಡ್ (BJP High Command) ಎರಡು ಆಫರ್ ನೀಡಿ ಸಮಾಧಾನ ಮಾಡಲು ಮುಂದಾಗಿತ್ತು. ಆದರೆ ಈ ಎರಡು ಆಫರ್ ಅನ್ನು ಶೆಟ್ಟರ್ ತಿರಸ್ಕರಿಸಿದ್ದು ಈ ಬಾರಿ ನಾನು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ (Hubblli Dharwad Central Constituency) ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಶನಿವಾರ ರಾತ್ರಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ ಶೆಟ್ಟರ್ ನಿವಾಸಕ್ಕೆ ಆಗಮಿಸಿ ಸಂಧಾನ ಮಾಡಲು ಮುಂದಾಗಿದ್ದರು. ಆದರೆ ಈ ಸಂಧಾನ ವಿಫಲವಾಗಿದ್ದು ಇಂದು ಶಿರಸಿಯಲ್ಲಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಚೇರಿಗೆ ತೆರಳಿ ಶೆಟ್ಟರ್ ರಾಜೀನಾಮೆ ನೀಡಲಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?
ಏನಿದು ಎರಡು ಆಫರ್?
2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬೆಳಗಾವಿಯಿಂದ (Belagavi) ಸ್ಪರ್ಧಿಸಲು ಹೈಕಮಾಂಡ್ ಆಫರ್ ನೀಡಿತ್ತು. ಮಂಗಳಾ ಅಂಗಡಿ ಅವರ ಸ್ಥಾನದಲ್ಲಿ ಸ್ಪರ್ಧಿಸಿದರೆ ಮುಂದಿನ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿತ್ತು. ಇದರ ಜೊತೆ ನಿಮ್ಮ ಕುಟುಂಬದ ವ್ಯಕ್ತಿಗೆ ಈ ಬಾರಿ ವಿಧಾನಸಭಾ ಟಿಕೆಟ್ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಈ ಎರಡು ಆಫರ್ಗಳನ್ನು ನಯವಾಗಿಯೇ ಶೆಟ್ಟರ್ ತಿರಸ್ಕರಿಸಿದ್ದು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಬಂಡಾಯ ಸಾರಿದ್ದಾರೆ.
ಶೆಟ್ಟರ್ ಹೇಳಿದ್ದೇನು?
ಎರಡು, ಮೂರು ತಿಂಗಳ ಹಿಂದೆಯೇ ನನಗೆ ರಾಜ್ಯ ರಾಜಕಾರಣದಿಂದ ಹಿಂದಕ್ಕೆ ಸರಿಯಬೇಕು ಎಂದು ತಿಳಿಸಿದ್ದರೆ ನಾನು ಮಾನಸಿಕವಾಗಿ ಸಿದ್ಧನಾಗಿ ಇರುತ್ತಿದ್ದೆ. ಆದರೆ ಈ ಚುನಾವಣೆಗೆ ನಾನು ಈಗಾಗಲೇ ಸಿದ್ಧತೆ ನಡೆಸಿದ್ದೇನೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ಪಕ್ಷ ನಮ್ಮನ್ನು ಯೂಸ್ ಆಂಡ್ ಥ್ರೊ ಮಾಡಿದ್ದು ನನ್ನನ್ನು ತುಳಿಯುವ ಹುನ್ನಾರ, ಷಡ್ಯಂತ್ರ ಮಾಡಲಾಗಿದೆ. 3 ತಿಂಗಳಿಂದ ನನ್ನ ಮೇಲೆ ಅಪಪ್ರಚಾರ ನಡೆಯುತ್ತಿದೆ. ಮೊದಲಿನ ಬಿಜೆಪಿ ಈಗ ಉಳಿದಿಲ್ಲ. ನನಗೆ ಟಿಕೆಟ್ ನಿರಾಕರಿಸಲು ಯಾವುದಾದರೂ ಒಂದು ಬಲವಾದ ಕಾರಣ ನೀಡಲಿ. ನನ್ನ ಕುಟುಂಬದವರಿಗೆ ಟಿಕೆಟ್ ಸಿಗುತ್ತದೆಯಂತೆ. ನಾನು ಹೇಳಿದ ವ್ಯಕ್ತಿಗೆ ಟಿಕೆಟ್ ಕೊಡುತ್ತಾರಂತೆ. ಆದರೆ ನಾನು ವಿಧಾನಸಭೆಗೆ ಹೋಗಬಾರದು ಎಂದರೆ ಹೇಗೆ? ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ನನ್ನ ಹಿತೈಷಿಗಳ ಜೊತೆ ಸೇರಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.