ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ (BJP) ಕಮಾಲ್ ಮಾಡಲು ಇದೀಗ ಒಕ್ಕಲಿಗ ಪ್ಲೇ ಕಾರ್ಡ್ನ್ನು ಪ್ಲೇ ಮಾಡುತ್ತಿದ್ದು, ಒಂದು ಕಡೆ ಸಚಿವ ಅಶ್ವಥ್ ನಾರಾಯಣ ಒಕ್ಕಲಿಗ ನಾಯಕನಾಗಲು ಮುಂದಾಗಿದ್ರೆ, ಇನ್ನೊಂದೆಡೆ ಕೆಂಪೇಗೌಡ ಪ್ರತಿಮೆಯನ್ನು ಚುನಾವಣೆಗೆ ಬಳಸಿಕೊಳ್ಳಲು ಮುಂದಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ ಮೂರ್ನ್ನಾಲ್ಕು ತಿಂಗಳು ಅಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ 3 ಪಕ್ಷಗಳು ತಮ್ಮದೇ ಆದ ತಂತ್ರಾಗಾರಿಕೆ ಮೂಲಕ ಚುನಾವಣೆ ಎದುರಿಸಲು ಮುಂದಾಗಿದೆ. ಇದೀಗ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಮಾಲ್ ಮಾಡಲು ಒಕ್ಕಲಿಗ ಜಾತಿ ಪ್ಲೇ ಕಾರ್ಡ್ನ್ನು ಹಿಡಿದುಕೊಂಡಿದೆ. ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಗೆಲ್ಲಲು ಒಕ್ಕಲಿಗ ವಾರ್ನ್ನು ಕಮಲ ಪಾಳಯ ಆರಂಭಿಸಿದೆ. ಕುಮಾರಸ್ವಾಮಿ ಸರಿಸಮನಾಗಿ ಮತ್ತೊಬ್ಬ ಒಕ್ಕಲಿಗ ನಾಯಕನ ಸೃಷ್ಟಿ ಮಾಡಲು ಮುಂದಾಗಿದ್ದು, ಬಿಜೆಪಿಯಲ್ಲಿ ಸಚಿವ ಅಶ್ವಥ್ ನಾರಾಯಣಗೆ (Ashwath Narayan) ಒಕ್ಕಲಿಗ ನಾಯಕನ ಪಟ್ಟ ಕಟ್ಟಲು ಪ್ಲ್ಯಾನ್ ಮಾಡುತ್ತಿದೆ.
ಕೆಂಪೇಗೌಡ ಪ್ರತಿಮೆಯ ಜನಾಭಿನಂದನಾ ಹೆಸರಲ್ಲಿ ಅಶ್ವಥ್ ನಾರಾಯಣಗೆ ಪಟ್ಟಾಭಿಷೇಕ ಮಾಡಲು ಕಾರ್ಯಕ್ರಮಗಳು ಜರುಗುತ್ತಿವೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಹಿನ್ನೆಲೆಯಲ್ಲಿ ಜನಾಭಿನಂದನಾ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಸಚಿವರಿಗೆ ಅದ್ದೂರಿ ಅಭಿನಂದನೆ ಸಲ್ಲಿಸುತ್ತಿದ್ದು, ಕೆಂಪೇಗೌಡರ ಅಭಿಮಾನಿ ಬಳಗದ ಹೆಸರಿನಲ್ಲಿ ಬಿಜೆಪಿ ಮುಖಂಡರಿಂದ ಕಾರ್ಯಕ್ರಮ ನಡೆಯುತ್ತಿವೆ. ಇದನ್ನೂ ಓದಿ: ಪಕ್ಷಕ್ಕೆ ತೊಂದರೆಯಾದ್ರೆ ನೀವಿಬ್ಬರೇ ಕಾರಣ – ಸಿದ್ದು, ಡಿಕೆಶಿಗೆ ಕೆ.ಸಿ ವೇಣುಗೋಪಾಲ್ ಖಡಕ್ ವಾರ್ನಿಂಗ್
ಈ ಕಾರ್ಯಕ್ರಮಕ್ಕೆ ಬಂದ ಸಚಿವ ಅಶ್ವಥ್ ನಾರಾಯಣಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ, ಪುಷ್ಪವೃಷ್ಠಿ ಸುರಿಸಿ ಸಚಿವರನ್ನು ಬರಮಾಡಿಕೊಳ್ಳಲಾಗುತ್ತಿದೆ. ತಮಗೆ ಶಕ್ತಿ ತುಂಬಬೇಕೆಂದು ಕಾರ್ಯಕ್ರಮದಲ್ಲಿ ಒಕ್ಕಲಿಗರಿಗೆ ಅಶ್ವಥ್ ನಾರಾಯಣ ಮನವಿ ಮಾಡುತ್ತಿದ್ದಾರೆ. ಇದೀಗ ಮದ್ದೂರು, ಮಳವಳ್ಳಿಯಲ್ಲಿ ಕಾರ್ಯಕ್ರಮ ನಡೆದಿದೆ. ಇದೇ ಮಾದರಿಯಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ ಸರಣಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದ್ದು, ಈ ಮೂಲಕ ಒಕ್ಕಲಿಗ ಕಾರ್ಡ್ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿ – BJP ಸಂಸದ ಸುಶೀಲ್ ಮೋದಿ ಆಗ್ರಹ