ಬಿಜೆಪಿಗೆ ಕಬ್ಬಿಣದ ಕಡಲೆಯಾದ ಅಥಣಿ ಕ್ಷೇತ್ರ

Public TV
2 Min Read
Mahesh Kumathalli laxman savadi

ಚಿಕ್ಕೋಡಿ: ಅಭ್ಯರ್ಥಿಗಳ ಆಯ್ಕೆಗೂ ಮುನ್ನವೇ ಬಿಜೆಪಿಯಲ್ಲಿ (BJP) ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ಆಯ್ಕೆಗೂ ಮುನ್ನವೇ ಅಥಣಿ ಮತಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ವಲಸಿಗ ಶಾಸಕ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೃತ್ತಿ ಎನ್ನುತ್ತಿರುವ ಗೋಕಾಕ್ ಸಾಹುಕಾರ ಮತ್ತೊಂದೆಡೆ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆ ಬನ್ನಿ ಎಂದು ಸವದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿಗೆ ಇದೀಗ ಅಥಣಿ (Athani) ಕ್ಷೇತ್ರ ತಲೆನೋವು ಎನಿಸಿಕೊಂಡಿದೆ.

ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ ವಲಸಿಗ ಶಾಸಕರು ಹಾಗೂ ಮೂಲ ಬಿಜೆಪಿಗರ ನಡುವಿನ ತಿಕ್ಕಾಟ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಭುಗಿಲೆದ್ದಿದೆ. ಬೆಳಗಾವಿ (Belegavi) ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ವಲಸಿಗ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಟಿಕೆಟ್ ನೀಡಬೇಡಿ ನನಗೆ ನೀಡಬೇಕು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಹಠಕ್ಕೆ ಬಿದ್ದಿದ್ದಾರೆ. ಅಥಣಿ ಪಟ್ಟಣದಲ್ಲಿ ಪಂಚಮಸಾಲಿ ಸಮಾವೇಶ ನಡೆಸಿ ಈ ಬಾರಿ ಟಿಕೆಟ್ ನನಗೆ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜೊತೆಗೆ ಸ್ವ ಪಕ್ಷದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Mahesh Kumathalli ramesh jarakiholi

ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಸೋಲಿನ ವಾತಾವರಣ ನಿರ್ಮಾಣವಾಗಿದೆ. ಈ ಸೋಲನ್ನು ನನ್ನ ಹಣೆಪಟ್ಟಿಗೆ ಕಟ್ಟುವುದಕ್ಕೆ ನನ್ನ ಜಿಲ್ಲೆಯಲ್ಲಿ ಕೆಲವರು ಇದ್ದಾರೆ. ಪಕ್ಷಕ್ಕೆ ಅಭ್ಯರ್ಥಿಗಳ ಸೋಲು ಬೇಡ. ನನಗೆ ಟಿಕೆಟ್ ಕೊಡಿ, ನಾನು ಗೆಲ್ಲುತ್ತೇನೆ ಎಂದು ಕೋರ್ ಕಮಿಟಿಯಲ್ಲಿ ತಿಳಿಸಿದ್ದೇನೆ ಎಂದು ಕುಮಟಳ್ಳಿ ವಿರುದ್ಧ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

ಅಥಣಿ ಕ್ಷೇತ್ರದಲ್ಲಿ ಪ್ರಬಲ ಸಮಾಜವಾಗಿರುವ ಪಂಚಮಸಾಲಿ ಸಮಾಜದ ಓಲೈಕೆಗೆ ಸವದಿ ಮುಂದಾಗಿದ್ದಾರೆ. ಪಂಚಮಸಾಲಿ ಸಮಾಜ ನನ್ನ ವಿರುದ್ಧ ಇದೆ ಎಂದು ಬಿಂಬಿಸಲಾಗುತ್ತಿದೆ. ಯಾವತ್ತೂ ಪಂಚಮಸಾಲಿ ಮೀಸಲಾತಿಗಾಗಿ ಧ್ವನಿ ಎತ್ತಿದವನು ನಾನೇ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹೇಳಿದವನು ನಾನು. ಅಥಣಿ ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಪಂಚಮಸಾಲಿ ಮತದಾರರನ್ನು ಸೆಳೆಯಲು ಸವದಿ ಮುಂದಾಗಿದ್ದಾರೆ.

Laxman Savadi 1

ಪಂಚಮಸಾಲಿ ಸಮಾಜದ ಮಹೇಶ್ ಕುಮಟಳ್ಳಿ ಅವರ ವೋಟ್ ಬ್ಯಾಂಕ್ ಮೇಲೆ ಸವದಿ ಕಣ್ಣಿಟ್ಟು ಪಂಚಮಸಾಲಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದಾರೆ. ಒಂದು ಕಡೆ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲನ್ನು ಗೋಕಾಕ್ ಸಾಹುಕಾರ ಕುಮಟಳ್ಳಿ ಪರ ಬ್ಯಾಟ್ ಬೀಸಿದರೆ ಮತ್ತೊಂದೆಡೆ ಬಿಜೆಪಿ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆಗೆ ಬರುವಂತೆ ಕಾರ್ಯಕರ್ತರಿಗೆ ಸವದಿ ಕರೆ ಕೊಡುತ್ತಿದ್ದಾರೆ. ಅಥಣಿ ಕ್ಷೇತ್ರದ ಈ ತಿಕ್ಕಾಟ ರಾಜ್ಯ ರಾಜಕಾರಣದಲ್ಲಿ ಮುಂದೆ ಬಹುದೊಡ್ಡ ಬೆಳವಣಿಗೆಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ. ಇದನ್ನೂ ಓದಿ: ಕಾಂಗ್ರೆಸ್ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಕಾದು ಕುಳಿತಿದೆ: ಬೊಮ್ಮಾಯಿ ವ್ಯಂಗ್ಯ

Share This Article