ಚಿಕ್ಕಮಗಳೂರು: ಬಿಎಸ್ ಯಡಿಯೂರಪ್ಪ ನಂಬರ್ ಒನ್ ಭ್ರಷ್ಟಾಚಾರಿ ಎನ್ನುವ ಹೇಳಿಕೆಯನ್ನು ಯಾರೋ ಕುಡಿದವರು ಹೇಳಿರಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮಗಳು ಅಮಿತ್ ಶಾ ಯಡಿಯೂರಪ್ಪ ನಂಬರ್ ಒನ್ ಭ್ರಷ್ಟಾಚಾರಿ ಎಂದು ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದಾಗ, ಈಶ್ವರಪ್ಪ ಯಾರೋ ಕುಡಿದವರು ಹೇಳಿರಬೇಕು. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉತ್ತರಿಸಿದರು.
ಈ ವೇಳೆ ಮಾಧ್ಯಮಗಳು ಇಲ್ಲ ಅಮಿತ್ ಶಾ ಅವರೇ ಈ ರೀತಿ ಹೇಳಿದ್ದಾರೆ ಎಂದು ಮರು ಪ್ರಶ್ನೆ ಹಾಕಿದಾಗ ಈಶ್ವರಪ್ಪ, ಅವರು ಆ ರೀತಿ ಹೇಳಿರಲಿಕ್ಕಿಲ್ಲ. ಅವರು ಹೇಳಿರುವುದು ನನಗೆ ಗೊತ್ತಿಲ್ಲ. ನಾನು ನೋಡಿಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಬಹಳಷ್ಟು ಜನ ಕುಡಿದು ಏನೇನೋ ಮಾತನಾಡುತ್ತಾರೆ. ಅವರು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡಬೇಕೇ? ವಿಧಾನ ಪರಿಷತ್ ನಲ್ಲೂ ನಾನು ಈ ರೀತಿಯಾಗಿ ಹೇಳಿದ್ದೇನೆ ಎಂದರು.
ರಾಹುಲ್ ಗಾಂಧಿ ಓರ್ವ ಮುಗ್ಧ ಬಾಲಕ ಎಂದ ಈಶ್ವರಪ್ಪ, ಅವರಿಗೆ ಎನ್ಸಿಸಿ ಅಂದರೆ ಏನು ಎನ್ನುವುದೇ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಉತ್ತರಿಸಬೇಕೇ? ಅವರು ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಭಸ್ಮವಾಗಿದೆ. ಹೀಗಾಗಿ ಅವರು ರಾಜ್ಯದ 224 ಕ್ಷೇತ್ರಕ್ಕೂ ಬರಲಿ ಎನ್ನುವುದು ನನ್ನ ಆಸೆ. ಹಾಗೇ ಬಂದರೆ ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಭಸ್ಮವಾಗಲಿದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರ ನಂ 1 ಭ್ರಷ್ಟಾಚಾರ ಸರ್ಕಾರ: ಅಮಿತ್ ಶಾ