ಬೆಂಗಳೂರು: ಶಾಲಾ ಮಕ್ಕಳ, ಪೋಷಕರ ಮಾಹಿತಿಯನ್ನೇ ಸರ್ಕಾರ ಖಾಸಗಿ ಕಂಪನಿಗೆ ಮಾರಾಟ ಮಾಡ್ತಿದೆ ಅನ್ನೋ ಅಚ್ಚರಿಯ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
1 ಕೋಟಿ 12 ಲಕ್ಷ ಮಕ್ಕಳ, ಪೋಷಕರ ಮಾಹಿತಿಯನ್ನು ಉತ್ತರ ಭಾರತದ ಸ್ಕೂಲ್ ಜಿ ಲಿಂಕ್ ಎಂಬ ಖಾಸಗಿ ಕಂಪನಿಗೆ ನೀಡಲು ಶಿಕ್ಷಣ ಇಲಾಖೆ ತಿಳುವಳಿಕೆ ಒಪ್ಪಂದ(ಎಂಒಯು) ಮಾಡಿಕೊಂಡಿದೆ. ಇದರ ಜೊತೆಗೆ ಶಿಕ್ಷಕರು, ಉಪನ್ಯಾಸಕರ ಮಾಹಿತಿಯನ್ನೂ ಖಾಸಗಿಯವರಿಗೆ ನೀಡುತ್ತಿದೆ ಎನ್ನಲಾಗಿದೆ.
ಕಾನೂನು ಮೀರಿ ಶಿಕ್ಷಣ ಇಲಾಖೆ ಈ ಒಪ್ಪಂದ ಮಾಡಿಕೊಂಡಿದ್ದು, ಖಾಸಗಿ ಕಂಪನಿ ಮಾಹಿತಿಗಳನ್ನ ಪಡೆದು ಆಪ್ ಮೂಲಕ ಸಾರ್ವಜನಿಕರಿಗೆ ನೀಡುತ್ತದೆ ಎಂಬುದಾಗಿ ತಿಳಿದುಬಂದಿದೆ.
ಮಹಿಳಾ ಐಎಎಸ್ ಅಧಿಕಾರಿ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಮಾಹಿತಿಗಳನ್ನ ಶೇರ್ ಮಾಡಲು ಎಂಒಯು ಒಪ್ಪಂದ ಮಾಡಿಕೊಂಡಿದ್ದಾರೆ. ಶಾಲಿನಿ ರಜನೀಶ್ ಜೊತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ನಾದನ್, ಸಹಾಯಕ ನಿರ್ದೇಶಕ ವೆಂಕಟೇಶ್ ಎಂಒಯುಗೆ ಸಹಿ ಮಾಡಿರುವುದಾಗಿ ಮಾಹಿತಿ ಲಭಿಸಿದೆ.
ಎಂಒಯುದಲ್ಲಿ ರಾಜ್ಯದ 1 ಕೋಟಿ 12 ಲಕ್ಷ ಮಕ್ಕಳ ಮಾಹಿತಿ, ಮಕ್ಕಳ ಪೋಷಕರ ಫೋನ್ ನಂಬರ್, ವಿಳಾಸ, ಕುಟುಂಬದ ಮಾಹಿತಿ ಇರುತ್ತದೆ. ಒಟ್ಟಾರೆ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಜನರ ಮಾಹಿತಿಗಳು ಇಲ್ಲಿರುತ್ತದೆ. ಗೌಪ್ಯ ಮಾಹಿತಿಯನ್ನ ಖಾಸಗಿಯವರಿಗೆ ನೀಡಬಾರದು ಅನ್ನೋ ನಿಯಮವಿದೆ. ಆದ್ರೂ ಪೋಷಕರ, ಮಕ್ಕಳ, ಶಿಕ್ಷಕರ ಮಾಹಿತಿ ಖಾಸಗಿ ಅವರಿಗೆ ನೀಡೋದು ಅಪರಾಧವಾಗಿದೆ. ಯಾರ ಅನುಮತಿ ಇಲ್ಲದೆ ಶಾಲಿನಿ ರಜನೀಶ್ ಅವರು ಎಂಒಯು ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಕ್ಯಾನ್ಸಲ್ ಮಾಡ್ತೀವಿ: ಈ ಸಂಬಂಧ ಶಿಕ್ಷಣ ಸಚಿವ ತನ್ವೀರ್ ಸೇಠ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಒಯು ಅಂಶಗಳು ನನಗೆ ತೋರಿಸಿದ್ದೇ ಬೇರೆ ಎಂಒಯು ಆಗಿರೋದು ಬೇರೆ. ನನ್ನ ಧಿಕ್ಕನ್ನೆ ಇಲಾಖೆ ಅಧಿಕಾರಿ ತಪ್ಪಿಸಿದ್ದಾರೆ. ಎಂಒಯು ಬದಲಾವಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಖಾಸಗಿ ಸಂಸ್ಥೆಗೆ ಮಾಹಿತಿ ನೀಡೋದು ಅಪರಾಧ. ಈ ಎಂಒಯುನಲ್ಲಿ ಸರ್ಕಾರದ ವಿರೋಧಿ ಅಂಶಗಳೇ ಹೆಚ್ಚಾಗಿವೆ. ಅಧಿಕಾರಿಗಳು ನಾವು ಮಾಡಿದ್ದೇ ಸರಿ ಅಂತ ಅಂದುಕೊಂಡಿದ್ದಾರೆ. ಪೋಷಕರ, ಮಕ್ಕಳ, ಶಿಕ್ಷಕರ ಮಾಹಿತಿ ನೀಡಬೇಕು ಅನ್ನೋ ಎಂಒಯು ಆಗಿರೋದು ನಿಜ. ಇದು ನನ್ನ ಗಮನಕ್ಕೆ ಬಾರದೆ ಆಗಿದೆ. ಎಂಒಯು ಅನ್ನು ಕ್ಯಾನ್ಸಲ್ ಮಾಡುತ್ತೇವೆ. ಅಧಿಕಾರಿಯ ವರ್ತನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಪೋಷಕರಿಗೆ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಅಂತ ಹೇಳಿದ್ದಾರೆ.