ಸಚಿವರ ವಿರುದ್ಧ ಬೇಸರಗೊಂಡ್ರಾ ಶಾಸಕರು? – ಕಾಂಗ್ರೆಸ್‌ ಶಾಸಕರ ಆರೋಪ ಏನು?

Public TV
2 Min Read
Karnataka Congress MLAs Letter Against Ministers complaint letter viral

ಬೆಂಗಳೂರು: ಅಧಿಕಾರಕ್ಕೆ ಬಂದ ಎರಡು ತಿಂಗಳು ಕಳೆಯುವ ಹೊತ್ತಲ್ಲಿಯೇ ಕಾಂಗ್ರೆಸ್‌ ಪಕ್ಷದಲ್ಲಿ (Karnataka Congress) ಅಸಮಾಧಾನ ಭುಗಿಲೆದ್ದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಸಂಪುಟದ (Siddaramaiah Cabinet)  ಸಚಿವರ ಕಾರ್ಯವೈಖರಿಗೆ ಬೇಸತ್ತ ಹತ್ತಾರು ಶಾಸಕರು ಸಿಎಂಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಯಾವುದೇ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಕ್ಷೇತ್ರದ ಅನುದಾನಕ್ಕಾಗಿ ಪರದಾಡುವ ಸ್ಥಿತಿ ಬಂದಿದ್ದು, ವರ್ಗಾವಣೆ ಸೇರಿ ನಮ್ಮ ಯಾವುದೇ ಶಿಫಾರಸುಗಳಿಗೆ ಸಚಿವರು ಕಿಮ್ಮತ್ತು ಕೊಡುತ್ತಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಕೂಡಲೇ ಸಿಎಂ ಮಧ್ಯಪ್ರವೇಶಿಸಬೇಕು. ಶಾಸಕಾಂಗ ಪಕ್ಷದ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು ಎಂದು ಕೋರಿದ್ದಾರೆ ಎನ್ನಲಾದ ಪತ್ರವೊಂದು ಹರಿದಾಡಿದೆ. ಈ ಪತ್ರದ ಬೆನ್ನಲ್ಲೇ ಇದೇ ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.  ಇದನ್ನೂ ಓದಿ: ಆಗಸ್ಟ್‌ 1 ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ನಿಷೇಧ – ಅಲೋಕ್ ಕುಮಾರ್

ಕಾಂಗ್ರೆಸ್‍ನ `ಆ’ ಶಾಸಕರ ಆರೋಪವೇನು?
ಜನರ ಪ್ರೀತಿ, ವಿಶ್ವಾಸದ ಕಾರಣ ನಾವು ಶಾಸಕರಾಗಿದ್ದೇವೆ. ಆದರೆ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರು ಸ್ಪಂದಿಸುತ್ತಿಲ್ಲ. ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಕೆಲ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಕೆಲ ಸಚಿವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ. ನಮ್ಮ ಯಾವುದೇ ಮಾತಿಗೆ ಅಧಿಕಾರಿಗಳು ಬೆಲೆಯನ್ನು ನೀಡುತ್ತಿಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂಗೆ ಪತ್ರ ಬರೆದಿರುವುದನ್ನು ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಒಪ್ಪಿಕೊಂಡಿದ್ದಾರೆ. ಬಿ.ಆರ್. ಪಾಟೀಲ್ ಬರೆದಿರುವ ಪತ್ರಕ್ಕೆ ಸಹಿ ಹಾಕಿದ್ದು ನಿಜ. ಆದರೆ ಯಾವುದೇ ಅಸಮಾಧಾನವಿಲ್ಲ ಎಂದಿದ್ದಾರೆ. ಇದು ನನ್ನ ಲೆಟರ್ ಹೆಡ್ ಅಲ್ಲ. ಇದು ಸಹಿಯೂ ಅಲ್ಲ ಎಂದು ಬಿಆರ್ ಪಾಟೀಲ್ (BR Patil) ಹೇಳಿದ್ದಾರೆ.

ಮೊದಲು ಯಾವುದೇ ಅಸಮಾಧಾನ ಇಲ್ಲ. ಯಾರು ದೂರು ಕೊಟ್ಟಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ, ಸಂಜೆ ಮಾತನಾಡುತ್ತಾ ನಾನು ಶಾಸಕರ ಪತ್ರ ಗಮನಿಸಿದ್ದೇನೆ. ಗುರುವಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

 

ಕಾಂಗ್ರೆಸ್ ಟ್ವೀಟ್ ಮಾಡಿ, ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಈಗ ತಮ್ಮ ಫೇಕ್ ಫ್ಯಾಕ್ಟರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿವೆ. ಗ್ಯಾರಂಟಿ ಜಾರಿ ಮಾಡಿದ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದ ವಿಪಕ್ಷಗಳು ನಕಲಿ ಸೃಷ್ಟಿಯ ಮೊರೆ ಹೋಗಿವೆ. ಶಾಸಕ ಬಿ ಆರ್ ಪಾಟೀಲ್ ಅವರ ಹಳೆಯ ವಿಳಾಸದ ನಕಲಿ ಲೆಟರ್ ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿಸಿದ ಸಾಧನೆ ಮಾಡುತ್ತೇವೆ ಎಂದುಕೊಂಡಿದ್ದರೆ ಅದು ಮೂರ್ಖತನವಾಗುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದೆ.

Web Stories

Share This Article