ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಪ್ರಸ್ತಾಪ ಸಲ್ಲಿಸಿದರು. ಬಳಿಕ ಸಚಿವ ಪಟ್ಟಿಯನ್ನು ಶಾ ಕೈಗೆ ಇಟ್ಟರು. ಆಗ ಅಮಿತ್ ಶಾ, ಈ ಬಗ್ಗೆ ಆಮೇಲೆ ಹೇಳುತ್ತೇವೆ ಎಂದರು. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಮರು ಮಾತನಾಡದೇ ಕೇವಲ ಎರಡೇ ನಿಮಿಷದಲ್ಲಿ ಅಲ್ಲಿಂದ ವಾಪಸ್ ಆದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಕೇವಲ 10 ನಿಮೀಷದಲ್ಲೇ ಜೆ.ಪಿ.ನಡ್ಡಾ, ಬಿಎಸ್ವೈ ಚರ್ಚೆ ಅಂತ್ಯ- ನಾಳೆ ಬೆಳಗ್ಗೆ ಬರುವಂತೆ ಸೂಚನೆ
ಅಮಿತ್ ಶಾ ಭೇಟಿಯ ಬಳಿಕೆ ಮಾತನಾಡಿ ಸಿಎಂ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಶುಕ್ರವಾರ ಬೆಳಗ್ಗೆ ಬರಲು ಹೇಳಿದ್ದಾರೆ. ಹಾಗಾಗಿ ನಾಳೆ ಮತ್ತೆ ಬಂದು ಭೇಟಿಯಾಗಿ ಸಂಪುಟ ಫೈನಲ್ ಮಾಡಿಕೊಂಡು ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದರು.
ಅಮಿತ್ ಶಾ ಅವರು ಕರೆದರೆ ಮಾತ್ರ ನಾಳೆ ಮಧ್ಯಾಹ್ನದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾತುಕತೆ ನಡೆಯಲಿದೆ. ಹಾಗಾಗಿ ನಾಳೆ ಸಂಜೆ ತನಕ ದೆಹಲಿಯಲ್ಲಿ ಕಾದುನೋಡುವ ತಂತ್ರಕ್ಕೆ ಯಡಿಯೂರಪ್ಪ ಶರಣಾಗಿದ್ದಾರೆ.