ಮಂಡ್ಯ: ಜಿಲ್ಲೆಯ ಲೋಕಸಭಾ ಉಪ-ಚುನಾವಣೆಯ ಫಲಿತಾಂಶದಲ್ಲಿ ಮತ್ತೊಮ್ಮೆ ಮಾಜಿ ಸಂಸದ ಮತ್ತು ಹಿರಿಯ ನಟ ಅಂಬರೀಶ್ ಅವರ ಭವಿಷ್ಯ ನಿಜವಾಗಿದೆ.
ಜಿಲ್ಲೆಯ ಲೋಕಸಭಾ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಸ್ಪರ್ಧಿಸಿದ್ದರು. ಇಂದಿನ ಫಲಿತಾಂಶದಲ್ಲಿ ಶಿವರಾಮೇಗೌಡ ದಾಖಲೆ ಬರೆಯುತ್ತಾರೆ ಎಂದು ಅಂಬರೀಶ್ ಮತದಾನ ವೇಳೆ ಹೇಳಿದ್ದಾರಂತೆ. ಹೀಗಾಗಿ ಅಂದು ಅಂಬಿ ನುಡಿದಿದ್ದ ಭವಿಷ್ಯ ಇಂದಿನ ಉಪಚುನಾವಣೆಯ ಫಲಿತಾಂಶದ ಮೂಲಕ ನಿಜವಾಗುತ್ತಿದೆ.
ಅಂಬರೀಶ್ ಮತದಾನದ ವೇಳೆ ಶಿವರಾಮೇಗೌಡ, ರಮ್ಯಾ ಮತ್ತು ನನ್ನ ದಾಖಲೆ ಮುರಿತ್ತಾನೆ. ಮಂಡ್ಯದ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಾನೆ. ಸ್ವತಃ ನನ್ನ ದಾಖಲೆಯನ್ನು ಎಲ್ಆರ್ಎಸ್ ಮುರಿತ್ತಾನೆ ಎಂದಿದ್ದರು.
ಈ ಹಿಂದೆಯೂ ಕೂಡ ಅಂಬರೀಶ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಅಂದು ನುಡಿದಿದ್ದ ಮಾತು ನಿಜವಾಗಿತ್ತು. ಆದ್ದರಿಂದ ಮತ್ತೆ ಅಂಬರೀಶ್ ನುಡಿದಿದ್ದ ಮಾತುಗಳು ಸಾಭೀತವಾಗಿದೆ ಎಂದು ಮಂಡ್ಯದ ಜನತೆ ಮಾತನಾಡಿಕೊಳ್ಳುತ್ತಾರೆ.
ಶಿವರಾಮೇಗೌಡ ಒಂಬತ್ತು ಸುತ್ತುಗಳಲ್ಲೇ 1,80,000 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆದುಕೊಂಡಿದ್ದು, ಭಾರಿ ಅಂತರದಿಂದ ಗೆಲ್ಲುವ ಸಾಧಿಸುವ ಮುನ್ಸೂಚನೆ ಇದೆ. ಸದ್ಯಕ್ಕೆ ಶಿವರಾಮೇಗೌಡ 3,94,807 ಮತಗಳನ್ನು ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ 1,61,135 ಮತ ಪಡೆದಿದ್ದಾರೆ. ಇದರಿಂದ ಶಿವರಾಮೇಗೌಡ ಸುಮಾರು 2,33,672 ಮತಗಳ ಅಂತರದಲ್ಲಿ ಮೂಂಚೂಣಿಯಲ್ಲಿದ್ದಾರೆ. ಈ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ದಾಖಲೆ ಹಿಂದಿಕ್ಕಿದ್ದಾರೆ.
1998ರಲ್ಲಿ ಅಂಬರೀಶ್ ಬಾರಿ ಅಂತರದಿಂದ ಜಿ.ಮಾದೇಗೌಡ ಅವರನ್ನು ಮಣಿಸಿದ್ದರು. ಅಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಂಬರೀಶ್ 4,31,439 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಾದೇಗೌಡ 2,50,916 ಮತ ಗಳಿಸಿದ್ದರು. ಬರೋಬ್ಬರಿ 1,80,523 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದರು. ಈಗ ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆಯನ್ನು ಎಲ್.ಆರ್. ಶಿವರಾಮೇಗೌಡ ಮುರಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv