ಬೆಂಗಳೂರು: ಇಂದು ಕಾಂಗ್ರಸ್ ಸರ್ಕಾರದ ಐದನೇ ಬಜೆಟ್ನ್ನು ಸಿದ್ದರಾಮಯ್ಯ ಮಂಡನೆ ಮಾಡಿದ್ದು, ಬಜೆಟ್ನಲ್ಲಿ ಕೇವಲ ಮೂಗಿಗೆ ತುಪ್ಪ ಸವರುವ ಸಣ್ಣ ಪ್ರಮಾಣದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಬಜೆಟ್ ಓದುವ ಮುನ್ನ ರಾಮರಾಜ್ಯ ಬಗ್ಗೆ ಮಾತನಾಡಿದರು. ಬಜೆಟ್ ಪ್ರಾರಂಭಿಕ ಹಂತದಲ್ಲಿಯೇ ನಾವು ಏನೇ ಒಳ್ಳೆಯ ಕೆಲಸ ಮಾಡಿದ್ರೂ ಜನರು ಟೀಕೆ ಮಾಡುತ್ತಾರೆ. ಬಜೆಟ್ ಓದಿದ ನಂತರ ತಮಗೆ ವ್ಯಾಪಕ ಟೀಕೆಗಳು ಬರುತ್ತವೇ ಎಂದು ಗೊತ್ತಿದ್ದೇ ಮುಖ್ಯಮಂತ್ರಿಗಳು ಮೊದಲೇ ಈ ಮಾತನ್ನು ಹೇಳಿದ್ದಾರೆ. ಕೃಷಿ ಮತ್ತು ಸಹಕಾರ ವಲಯಕ್ಕೆ ಕೊಡಬೇಕಾದ ಆದ್ಯತೆ ಕೊಟ್ಟಿಲ್ಲ. ಸಹಕಾರ ಸಂಘಗಳಲ್ಲಿಯ ರೈತರ ಸಾಲಮನ್ನಾ ಮಾಡಬಹುದು ಎಂದು ಎಲ್ಲರಿಗೂ ನಿರೀಕ್ಷೆಯಿತ್ತು. ಅದನ್ನು ಸುಳ್ಳು ಮಾಡಿದೆ. ಚುನಾವಣೆ ಹೋಗುವ ಸಮಯದಲ್ಲಿ ಸಣ್ಣ ಸಣ್ಣ ಸಮಾಜದ ಹೆಸರುಗಳನ್ನು ಪ್ರಿಂಟ್ ಮಾಡಿ ಓದುದರ ಮೂಲಕ ಎಲ್ಲ ಸಮಾಜಗಳನ್ನು ನೆನಪಿಸಿಕೊಂಡಿದ್ದೇನೆ ಎಂಬುದನ್ನು ತೋರಿಸಿದ್ದಾರೆ ಎಂದರು.
ಸಣ್ಣ ಸಮಾಜದ 1 ರಿಂದ 2 ಸಾವಿರ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕಡಿಮೆ ಪ್ರಮಾಣದ ಅನುದಾನಗಳನ್ನು ಘೋಷಣೆ ಮಡಿದ್ದಾರೆ. ಸಿದ್ದರಾಮಯ್ಯ ಈ ರೀತಿಯ ಬಜೆಟ್ ಮಂಡನೆ ನಿರೀಕ್ಷೆಗಳು ಇರಲಿಲ್ಲ. ಸಣ್ಣ ಸಮಾಜಗಳಿಗೆ ಉಪಯೋಗಕ್ಕೆ ಬಾರದ ಯೋಜನೆ ಮತ್ತು ಅನುದಾನ ಬಿಡುಗಡೆ ಮಾಡಿದ್ದಾರೆ. ಸಮಾಜಗಳ ಅಭಿವೃದ್ಧಿ ಪೂರಕ ಯೋಜನೆಗಳಿಲ್ಲ. ಇನ್ನು ಬೆಂಗಳೂರು ನಗರಕ್ಕೆ ಯಾವುದೇ ವಿಶೇಷ ಯೋಜನೆಗಳಿಲ್ಲ. ಕಳೆದ ಬಾರಿಯ ಯೋಜನೆಗಳನ್ನು ಇನ್ನೊಮ್ಮೆ ನೆನಪಿಸಿಕೊಂಡಿದ್ದಾರೆ. ನಾನು ಸಿಎಂ ಆದಾಗ ಬೆಂಗಳೂರು ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 7300 ಕೋಟಿ ಇನ್ನು ಜಾರಿಗೆ ಬಂದಿಲ್ಲ. ಅದು ಹಾಗೆ ಪುಸ್ತಕದಲ್ಲಿಯೇ ಉಳಿಯುವಂತೆ ಕಾಣುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಸಾಲಮನ್ನಾ ಮಾಡಬೇಕೆಂದು ಹೋರಾಟ ಮಾಡುವ ನೈತಿಕತೆ ಇಲ್ಲ. ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ, ನಾನು ರಾಜ್ಯಪಾಲರ ಭಾಷಣದಲ್ಲಿ ಸಾಲಮನ್ನಾ ಬಗ್ಗೆ ಒಂದು ಪ್ಯಾರಾವನ್ನು ಸೇರಿಸಿದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಕ್ಯಾಬಿನೆಟ್ನಲ್ಲಿ ನಾನು ಸೇರಿಸಿದ ಸಾಲಗಳನ್ನು ತೆಗೆದು ಹಾಕಲಾಯಿತು. ನಾನು ಸಾಲಮನ್ನಾ ಮಾಡಲು ಹೋದಾಗಲೂ ಬಿಜೆಪಿ ನನ್ನ ನಿರ್ಧಾರವನ್ನು ವಿರೋಧಿಸಿತ್ತು ಎಂದು ಹೇಳಿದರು.
2010ರಲ್ಲಿ ರಾಜ್ಯದಲ್ಲಿ ಅತೀವೃಷ್ಠಿಯಾದಾಗ ನಾನು ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಲಮನ್ನಾ ಮಾಡುವಂತೆ ಕೇಳಿದಾಗ, ಖಜಾನೆಯಲ್ಲಿ ಅಕ್ಷಯ ಪಾತ್ರೆ ಇಟ್ಟಕೊಂಡಿಲ್ಲ. ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಇದೇ ಬಿಎಸ್ವೈ ಹೇಳಿದ್ರು. ಇನ್ನು ಜಗದೀಶ್ ಶೆಟ್ಟರೂ ಚುನಾವಣಾ ಪೂರ್ವದಲ್ಲಿ ಪೂರ್ಣವಾಗಿ ಸಾಲಮನ್ನಾ ಮಾಡಲಿಲ್ಲ. ಒಂದು ಕಡೆ ಸಾಲಮನ್ನಾ ಮಾಡಿ, ವ್ಯಾಟ್ ದರವನ್ನು ಹೆಚ್ಚಿಗೆ ಮಾಡಿದ್ದರು. ಇಲ್ಲಿ ರಸ್ತೆಯಲ್ಲಿ ಕೇಸರಿ ಧ್ವಜವನ್ನು ಹಿಡಿದು ಪ್ರತಿಭಟನೆ ಮಾಡಿದ್ರೆ ಏನು ಸಾಧ್ಯವಿಲ್ಲ. ನಿಮ್ಮ ತಂಡದೊಂದಿಗೆ ದೆಹಲಿಗೆ ಹೋಗಿ ಮೋದಿ ಅವರ ಮುಂದೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಉತ್ತರ ಪ್ರದೇಶದ ಚುನಾವಣೆ ಸಮಯದಲ್ಲಿ ಅಲ್ಲಿಯವ ರೈತರಿಗೆ ಸಾಲಮನ್ನಾ ಮಾಡುವ ಆಶ್ವಾಸನೆ ನೀಡಿದ್ದರು. ಇವಾಗ ಅವರದೇ ಸರ್ಕಾರವಿದೆ ನೋಡೋಣ ಮುಂದೆ ಏನು ಮಾಡ್ತಾರೆ ಎಂದು ಕುಮಾಸ್ವಾಮಿ ತಿಳಿಸಿದರು.