Bengaluru City
ಸೋಮವಾರದ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ: ಸಿಎಂ

ಹುಬ್ಬಳ್ಳಿ: ಸೋಮವಾರ ನಡೆಯುವ ಕರ್ನಾಟಕ ಬಂದ್ ಯಶಸ್ವಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳು ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ವಿಚಾರ ಮತ್ತು ಬಯಲು ಸೀಮೆ ಕುಡಿಯುವ ನೀರು ಸೇರಿದಂತೆ ಇತರ ಬೇಡಿಕೆ ಈಡೇರಿಸಿ ನಾಳೆ ಕನ್ನಡಪರ ಸಂಘಟನೆಗಳು ನಡೆಸುವ ಬಂದ್ ಕರೆ ನೀಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ಬಂದ್ ಯಶಸ್ವಿಯಾಗುವುದಿಲ್ಲ ಎಂದು ಸಿಎಂ ಉತ್ತರಿಸಿದರು.
ಅಮಿತ್ ಶಾ ವಿರುದ್ಧ ಗರಂ: ಗಾಂಧೀಜಿಯವರನ್ನು ಚತುರ ವರ್ತಕ ಎಂದು ಕರೆದಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ ಗಾಂಧೀಜಿಯ ಬಗ್ಗೆ ಅವರಿಗೆ ಗೊತ್ತಿಲ್ವಾ? ಇಡೀ ರಾಷ್ಟ್ರಕ್ಕೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಗಾಂಧೀಜಿಯವರ ಬಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಅಮಿತ್ ಶಾ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ನಮ್ಮಲ್ಲಿ ಅವಕಾಶವಿದೆ: ಗೋಹತ್ಯೆ ನಿಷೇಧ ಕಾನೂನು ಜಾರಿ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು ಗೋಹತ್ಯೆ ಆಯಾ ಆಯಾ ರಾಜ್ಯಕ್ಕೆ ಸಂಬಂಧಪಟ್ಟಿರುತ್ತದೆ. ವಯಸ್ಸಾದ ಗೋವುಗಳನ್ನು ಯಾರು ಸಾಕುತ್ತಾರೆ, ವಯಸ್ಸಾದ ಗೋವುಗಳ ಹತ್ಯೆಗೆ ನಮ್ಮಲ್ಲಿ ಅವಕಾಶವಿದೆ ಎಂದು ಹೇಳಿದರು.
ಜಿಎಸ್ಟಿ ಯಾವ ಯಾವ ಆಹಾರ ಧಾನ್ಯಗಳ ಮೇಲೆ ಹಾಕಲಾಗುತ್ತದೆ ನೋಡಬೇಕು. ಇದು ಎಷ್ಟರ ಮಟ್ಟಿಗೆ ಜನ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ
