ಬೆಂಗಳೂರು: ಚುನಾವಣೆ ಮುಗಿಯಿತು, ಕಾಂಗ್ರೆಸ್ ಗೆದ್ದಾಯ್ತು. ಈಗ ಸಿಎಂ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಹೌದು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಹೈಕಮಾಂಡ್ ಒಗ್ಗಟ್ಟಿನ ಮಂತ್ರ ಪಠಿಸಿದೆ. ಭಾರತ್ ಜೋಡೋ ಯಾತ್ರೆ (Bharat Jodo Yatre) ವೇಳೆಯಲ್ಲೂ ರಾಹುಲ್ ಗಾಂಧಿಯವರು ಇಬ್ಬರ ಕೈ ಕೈ ಹಿಡಿಸಿದ್ದರು. ಚುನಾವಣೆ ಮುಗಿಯುವ ತನಕವೂ ಒಗ್ಗಟ್ಟು ಪ್ರದರ್ಶನ ಮಾಡಿರುವ ಡಿಕೆಶಿ, ಸಿದ್ದರಾಮಯ್ಯ (Siddaramaiah) ಚುನಾವಣೆ ದಿನವೂ ಒಟ್ಟಿಗೆ ಪೂಜೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಆದರೆ ಇದೀಗ ಅಧಿಕಾರ ಸಿಕ್ಕಾಯ್ತು, ಇಬ್ಬರೂ ಸಿಎಂ ಕುರ್ಚಿಯ ಕನಸು ಕಂಡಿದ್ದಾರೆ. ಇದರಲ್ಲಿ ಯಾರಾದ್ರೂ ಒಬ್ಬರು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇನ್ನೊಂದೆಡೆ ಇಬ್ಬರು ನಾಯಕರನ್ನ ಕೂರಿಸಿ 50:50 ಸೂತ್ರವನ್ನ ಹೈಕಮಾಂಡ್ ಮುಂದಿಡುವ ಸಾಧ್ಯತೆ ಇದ್ದು, ಆ ಸೂತ್ರದಲ್ಲಿ ಮೊದಲು ಸಿಎಂ ಆಗೋರು ಯಾರು..? ಯಾರು ಯಾರಿಗೆ ಸೀಟ್ ಬಿಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಯುವಕ
ಒಟ್ಟಿನಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆಶಿ (DK Shivakumar) ಇಬ್ಬರಿಗೆ ಯಾರಿಗೆ ಲಕ್ ಎನ್ನುವುದು ಇಂದು ಬಯಲಾಗುವ ಸಾಧ್ಯತೆಗಳಿವೆ. ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ. ಆದರೆ ಈ ಸಭೆ ಅನೌಪಚಾರಿಕ ಸಭೆಯೋ ಅಥವಾ ಸಿಎಂ ಆಯ್ಕೆ ಸಭೆಯೋ ಎನ್ನುವುದು ಸ್ಪಷ್ಟವಾಗಿಲ್ಲ. ಅಪ್ಪ ಸಿದ್ದರಾಮಯ್ಯ ಪರ ಮಗ ಯತೀಂದ್ರ ಬ್ಯಾಟಿಂಗ್ ಮಾಡಿದ್ದಾರೆ. ತನ್ನ ತಂದೆ ಸಿದ್ಧಾಂತದ ರಾಜಕಾರಣಿ, ಅವರು ಸಿಎಂ ಆಗಬೇಕು. ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಜನರ ಇಚ್ಚೆ ಅಂದರೆ ಇತ್ತ ಅಣ್ಣನ ಪರ ಸಂಸದ ಡಿ.ಕೆ ಸುರೇಶ್ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ಶಾಸಕ ರಂಗನಾಥ್ ಕೂಡ ಡಿಕೆಶಿಯೇ ಸಿಎಂ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನಲ್ಲಿ 2013ರಲ್ಲೂ ಶಾಸಕರಿಂದಲೇ ಸಿಎಂ ಆಯ್ಕೆ ಮಾಡಲಾಗಿತ್ತು. ಅಂದು ಎ.ಕೆ.ಆಂಟನಿ ವೀಕ್ಷಕರಾಗಿ ಅವರ ಸಮ್ಮುಖದಲ್ಲಿ ಸಿಎಲ್ಪಿ ಸಭೆ ನಡೆದಿತ್ತು. ಹೈಕಮಾಂಡ್ ಸೂಚನೆ ಮೇರೆಗೆ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಎಐಸಿಸಿ (AICC) ಯು ಶಾಸಕರ ಬಲಾಬಲದ ಮೇಲೆ ಸಿಎಂ ಆಯ್ಕೆ ಮಾಡುತ್ತಾ, ಇಲ್ಲ ಹೈಕಮಾಂಡ್ ಹೇಳಿದವರೇ ಸಿಎಂ ಅಂತಾ ಸಂದೇಶ ರವಾನಿಸುತ್ತಾ ಎಂಬ ಕುತೂಹಲ ಹುಟ್ಟಿದೆ.