ಬೆಂಗಳೂರು: ಬಸವರಾಜ ಹೊರಟ್ಟಿ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಪರಿಷತ್ ಹಂಗಾಮಿ ಸಭಾಪತಿ ನೇಮಕ ಇಂದು ನಡೆಯಲಿದೆ.
ಹಂಗಾಮಿ ಸಭಾಪತಿ ಸ್ಥಾನಕ್ಕೆ ಎಮ್ಮೆಲ್ಸಿ ರಘುನಾಥ್ ರಾವ್ ಮಲ್ಕಾಪೂರೆ ಹೆಸರನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಲ್ಕಾಪೂರೆ ಅವರೇ ವಿಧಾನ ಪರಿಷತ್ ಸಭಾಪತಿ ಆಗುವುದು ಬಹುತೇಕ ಖಚಿತವಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಂಗಾಮಿ ಸಭಾಪತಿ ನೇಮಕ ಮಾಡಲಿದ್ದಾರೆ. ಹಾಲಿ ಪರಿಷತ್ನ ಹಿರಿಯ ಸದಸ್ಯರಾದ ಶಶೀಲ್ ನಮೋಶಿ, ರಘುನಾಥ್ ಮಲ್ಕಾಪುರೆ, ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ತೇಜಸ್ವಿನಿ ರಮೇಶ್ ಮೊದಲಾದವರ ಹೆಸರು ಹಂಗಾಮಿ ಸಭಾಪತಿ ಪಟ್ಟಿಯಲ್ಲಿ ಇತ್ತು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್
ಹಂಗಾಮಿ ಸಭಾಪತಿ ನೇಮಕವಾದರೆ ಪ್ರಮಾಣ ವಚನ ಮೊದಲಾದ ಪ್ರಕ್ರಿಯೆಗಳು ಇರುವುದಿಲ್ಲ. ಕೇವಲ ಸಭಾಪತಿ ಹುದ್ದೆಯ ಕಾರ್ಯನಿರ್ವಹಣೆ ಹೊಣೆಗಾರಿಕೆ ಮಾತ್ರ ಇರಲಿದೆ. ಹಂಗಾಮಿ ಸಭಾಪತಿ ನೇಮಕ ಬಳಿಕವಷ್ಟೇ ಬಸವರಾಜ ಹೊರಟ್ಟಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ಅಂಗೀಕಾರ ಪ್ರಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಅವರ ಉದ್ದೇಶಿತ ಬಿಜೆಪಿ ಸೇರ್ಪಡೆ ವಿಳಂಬವಾಗಲಿದೆ.