ನವದೆಹಲಿ: ಪ್ರಸ್ತುತ ಶಾಲಾ ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಪಠ್ಯಕ್ರಮವಾಗಿ ಅಳವಡಿಸುವ ಸಂಬಂಧ ಚರ್ಚೆ ಎದ್ದಿದೆ. ಭಗವದ್ಗೀತೆಯ ಪರ – ವಿರೋಧ ಚರ್ಚೆಗಳು ನಡೆಯುತ್ತಿದ್ದು, ಸದ್ಯಕ್ಕೆ ಪಠ್ಯಕ್ರಮದಲ್ಲಿ ಅಳವಡಿಸುವುದಿಲ್ಲ. ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.
ಇಂತಹ ಸಂದರ್ಭದಲ್ಲಿಯೇ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಭಗವದ್ಗೀತೆಯ ಮೂಲ ದಾಖಲೆಗಳನ್ನು ಕೇಳಿ ಸಲ್ಲಿಸಿದ್ದ ಅರ್ಜಿ ಮಹತ್ವ ಪಡೆದುಕೊಂಡಿದೆ. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಮೂಲ ಪ್ರತಿ ಕುರಿತಂತೆ ಬೆಳಗಾವಿ ಮೂಲದ ವಕೀಲ ಸುರೇಂದ್ರ ಉಗಾರೆ ಅವರು, ಭಗವದ್ಗೀತೆಯ ಮೂಲ ಪುಟಗಳ ಮಾಹಿತಿ ಮತ್ತು ಅದನ್ನು ಎಲ್ಲಿ ಸಂರಕ್ಷಿಸಿಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕೃತ ಪುಸ್ತಕಗಳು ಹಾಗೂ ಅವುಗಳನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಗಳ ಹೆಸರನ್ನು ತಿಳಿಸಿ ಎಂದು ಅವರು 2005ರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4 ಮತ್ತು 6ರ ಅಡಿ ಕಳೆದ ವರ್ಷ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಈ ಮಾಹಿತಿ ಕೋರುತ್ತಿರುವುದಾಗಿ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ- ತಪ್ಪಿದ ಭಾರೀ ಅನಾಹುತ
ಆದರೆ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐಒ ಮತ್ತು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಅಂಜನಾ, ಅಂತಹ ಮಾಹಿತಿ ಸಚಿವಾಲಯದ ತಮ್ಮ ವಿಭಾಗದಲ್ಲಿ ಲಭ್ಯವಿಲ್ಲ. ಈ ಉತ್ತರ ತೃಪ್ತಿದಾಯಕವಾಗಿರದಿದ್ದರೆ ಕಾಯ್ದೆ ಸೆಕ್ಷನ್ 19ರ ಅಡಿ ಸಚಿವಾಲಯದ ಉಪ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡದೇ ಶುಲ್ಕ ವಿಧಿಸಿದ ಸರ್ಕಾರ – ರೈತರು ಕಂಗಾಲು