ಇಂದು ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಆರಾಧಕರು ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಕೆಲವರು ಮನೆಯಲ್ಲಿಯೇ ಕೃಷ್ಣನ ವಿಗ್ರಹಕ್ಕೆ ಪೂಜೆ ಮಾಡುತ್ತಾರೆ. ಆದರೆ ಪೂಜೆ ಮಾಡುವ ಮುನ್ನಾ ಕೃಷ್ಣನಿಗಾಗಿ ಸಿಹಿ ಪ್ರಸಾದ ಮಾಡಿ ನೈವೆದ್ಯವನ್ನು ಇಡಬೇಕು. ಪ್ರತಿ ಹಬ್ಬಕ್ಕೂ ಕೇಸರಿ ಬಾತ್, ಪಾಯಸ ಅದೇ ಸಿಹಿ ತಿಂಡಿ ಮಾಡಿ ಬೇಸರವಾಗಿರುತ್ತದೆ. ಈ ಬಾರಿ ಕೃಷ್ಣನಿಗಾಗಿ ಏನಾದರೂ ವಿಶೇಷ ಸಿಹಿತಿಂಡಿ ಮಾಡಬೇಕು ಅಂದುಕೊಂಡಿರುತ್ತೀರಾ.. ಆದ್ದರಿಂದ ನಿಮಗಾಗಿ ಬೇಗ ಹಾಗೂ ಸುಲಭವಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು
1. ಮೈದಾ ಹಿಟ್ಟು – ಅರ್ಧ ಕೆಜಿ
2. ಉಪ್ಪು – ಚಿಟಿಕೆ
3. ಎಣ್ಣೆ – ಕರಿಯಲು
4. ಕೊಬ್ಬರಿ – 1/2 ಕೆಜಿ
5. ಸಕ್ಕರೆ – 1/4 ಕೆಜಿ
6. ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ
* ಮೈದಾ ಹಿಟ್ಟನ್ನು ಜರಡಿ ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
* ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿಯನ್ನು ಬೆರೆಸಿಡಿ.
* ಇತ್ತ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿ ಸೈಜ್ನಲ್ಲಿ ಲಟ್ಟಿಸಿ.
* ಹೀಗೆ ಲಟ್ಟಿಸಿದ ಪೂರಿ ಸೈಜ್ನ ಒಳಗೆ ಕೊಬ್ಬರಿ ಮಿಶ್ರಿತ ಊರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ. (ಮಾರ್ಕೆಟ್ ನಲ್ಲಿ ಕರ್ಜಿಕಾಯಿ ಮಾಡುವ ಮೌಲ್ಡ್ ಸಿಗುತ್ತೆ ಅದನ್ನು ಬಳಸಿಯೂ ಮಾಡಬಹುದು)
* ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
* ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv