– ಆಯುಕ್ತೆ ವಿರುದ್ಧ ಎಸ್ಜಿ ಸಿದ್ದರಾಮಯ್ಯ ಗರಂ
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಆಯುಕ್ತೆ ಶಾಲಿನಿ ರಜನೀಶ್ ಅವರು, ಕನ್ನಡವನ್ನು ಬೋಧಿಸದ ಖಾಸಗಿ ಶಾಲೆ ಪರ ನಿಂತು ಈಗ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈಗ ಶಾಲಿನಿ ರಜನೀಶ್ ಅವರ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಅಂಗಳಕ್ಕೆ ದೂರು ತಲುಪಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಆಯುಕ್ತೆ ಶಾಲಿನಿ ರಜನೀಶ್ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದು, ಇಂತಹ ಅಧಿಕಾರಿ ಯಾಕೆ ಬೇಕು ಅಂತ ಸಿಎಂಗೆ ದೂರು ನೀಡಲು ತಯಾರಾಗಿದ್ದಾರೆ.
ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸಬೇಕು ಅನ್ನುವ ಕಾಯ್ದೆ ಇದೆ. ರಾಜ್ಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಖಾಸಗಿ ಶಾಲೆಯಲ್ಲಿ ಕನ್ನಡವೇ ಇಲ್ಲ. ಈ ಶಾಲೆಗಳ ಪಟ್ಟಿ ಸಮೇತ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಿರಂತರ ಪತ್ರ ಬರೆಯಲಾಗಿದೆ. ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಾಲಿನಿ ರಜನೀಶ್ಗೆ ಹತ್ತಕ್ಕೂ ಹೆಚ್ಚು ಪತ್ರ ಬರೆಯಲಾಗಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ನಿಂತು ಯಾವುದೇ ಕ್ರಮ ವಹಿಸದೇ ಪ್ರಾಧಿಕಾರಕ್ಕೂ ಉತ್ತರ ನೀಡುತ್ತಿಲ್ಲ ಎಂದು ಎಸ್.ಜಿ. ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಹಿಂದೆ ಶಾಲಿನಿ ವರ್ತನೆ ಬಗ್ಗೆ ಸಚಿವ ಮಹೇಶ್ ಗಮನಕ್ಕೂ ತರಲಾಗಿದೆ. ಆದರೆ ಖಾಸಗಿ ಶಾಲೆಗಳ ಪರ ಲಾಬಿ ಮಾಡಿ ಅಂದು ಸಚಿವರ ಮುಂದೆಯೇ ಇನ್ನೊಬ್ಬ ಅಧಿಕಾರಿ ಶಿಖಾ ಜೊತೆ ಶಾಲಿನಿ ಕ್ಯಾತೆ ತೆಗೆದಿದ್ದರು. ಸರ್ಕಾರಿ ಆದೇಶ ಉಲ್ಲಂಘಿಸುವ ಇಂತಹ ಅಧಿಕಾರಿಗಳು ಯಾಕೆ ಅಂತ ಸಿದ್ದರಾಮಯ್ಯ ಕಿಡಿಕಾರಿದ್ದು, ಈಗ ಸಿಎಂಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ ಅಂತ ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=sLCBgAzB5us