ಹುಬ್ಬಳ್ಳಿ: ಅಂಗನವಾಡಿ ಕೇಂದ್ರದಲ್ಲಿ ಬಳಸುವ ತೊಗರಿ ಬೇಳೆಯಲ್ಲಿ ಹುಳುಗಳು ಕಂಡು ಬಂದಿದೆ. ಅದೇ ಬೇಳೆಯಿಂದ ಸಾಂಬಾರು ಸಿದ್ಧಪಡಿಸಿ ಮಕ್ಕಳಿಗೆ ಊಟ ಬಡಿಸಿದ ಘಟನೆ ಕಲಘಟಗಿಯಲ್ಲಿ ಬೆಳಕಿಗೆ ಬಂದಿದೆ.
ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನೂರು ಗ್ರಾಮದ ಅಂಗನವಾಡಿ ಮಕ್ಕಳಿಗೆ ಹುಳುಮಿಶ್ರಿತ ಆಹಾರ ನೀಡಲಾಗಿದೆ. ಈ ಬಗ್ಗೆ ಗ್ರಾಮಸ್ಥರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಅಂಗನವಾಡಿ ಸಹಾಯಕಿ ಆಹಾರ ಪದಾರ್ಥಗಳನ್ನು ಸ್ವಚ್ಛ ಮಾಡದೇ ತೊಗರಿ ಬೆಳೆಯಲ್ಲಿ ಹುಳುಗಳಿದ್ದು, ಅದರಲ್ಲೇ ಅಡುಗೆ ಮಾಡಿ ಮಕ್ಕಳಿಗೆ, ಬಾಣಂತಿಯರಿಗೆ ಬಡಿಸಿದ್ದಾರೆ. ಲೋಪ ಎಸಗಿರುವ ಸಿಬ್ಬಂದಿ, ಅಡುಗೆ ಸಹಾಯಕಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅಂಗನವಾಡಿ ಸಹಾಯಕಿ 15 ಕೆಜಿ ತೊಗರಿ ಬೇಳೆಯಲ್ಲಿ ಹುಳು ಕಂಡುಬಂದಿವೆ. ಬಹಳ ದಿನಗಳಿಂದ ಧಾನ್ಯ ಸಂಗ್ರಹಿಸಿದ್ದರಿಂದ ಹುಳುಗಳು ಆಗಿವೆ. ಇನ್ನು ಮುಂದೆ ಹುಳುಗಳು ಇರೋ ಬೇಳೆ ಅಡುಗೆಗೆ ಬಳಸಲ್ಲವೆಂದು ತಿಳಿಸಿದ್ದಾರೆ.