ಚಿಕ್ಕಮಗಳೂರು: ಲಾಕ್ಡೌನ್ ಸೈಡ್ ಎಫೆಕ್ಟ್ ಪ್ರಾಣಿಗಳ ಮೇಲಾಗಿದೆ. ಚಿಕ್ಕಮಗಳೂರಿನ ಕಲ್ಲತ್ತಗಿರಿ ಜಲಪಾತದ ಬಳಿ ಕೋತಿಗಳು ಆಹಾರವಿಲ್ಲದೇ ಪರದಾಡ್ತಿವೆ. ಇದನ್ನು ಕಂಡ ಯುವಕರ ತಂಡ ಅನ್ನ ತಂದಿಟ್ಟಿದ್ದಾರೆ. ಹಸಿವಿನಿಂದ ಬಳಲಿದ್ದ ಕೋತಿಗಳು ಎರಡು ಕೈಗಳಲ್ಲಿ ಬಾಚಿ ಬಾಚಿ ತಿಂದು ಹಸಿವು ನೀಗಿಸಿಕೊಂಡಿವೆ.
ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಕಲ್ಲತ್ತಿಗರಿ ಜಲಪಾತದ ಅಂದರೆ ಹೆಸರು ವಾಸಿ. ಕಲ್ಲತ್ತಿಗರಿ ಸದಾ ನೀರು ಹರಿಯೋ ಜಲಪಾತದ ಜಾಗ. ಇಲ್ಲಿಂದ 6 ಕಿ.ಮೀ. ದೂರದಲ್ಲಿ ಇತಿಹಾಸ ಪ್ರಸಿದ್ಧ ಕೆಮ್ಮಣ್ಣುಗುಂಡಿ ಇದೆ. ಇಲ್ಲಿಗೆ ವರ್ಷ ಪೂರ್ತಿ ಪ್ರವಾಸಿಗರು ಬರುತ್ತಿದ್ದರು. ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕೋತಿಗಳು ಕೊರೊನ ಲಾಕ್ಡೌನ್ನಿಂದ ಆಹಾರಕ್ಕಾಗಿ ಪರದಾಟ ನಡೆಸಿದ್ದವು.
ಸ್ಥಳೀಯರಿಂದ ವಿಷಯ ತಿಳಿದ ಕಡೂರು ತಾಲೂಕಿನ ಬೀರೂರಿನ 6 ಯುವಕರು ಕಳೆದ 20 ದಿನಗಳಿಂದ ದಿನ ಬಿಟ್ಟು ದಿನ ಕೋತಿಗಳಿಗೆ ಆಹಾರ ನೀಡುತ್ತಿದ್ದಾರೆ. ಬೀರೂರಿನಿಂದ ಕಲ್ಲತ್ತಿಗರಿಗೆ 30 ಕಿ.ಮೀ ಅಂತರವಿದೆ. ವಾರಕ್ಕೆ ಮೂರ್ನಾಲ್ಕು ಬಾರಿ ಹೋಗಿ ಕಲ್ಲತ್ತಿಗರಿಯಲ್ಲಿರೋ 300 ಕೋತಿ, 30-40 ಹಸು ಹಾಗೂ 15-20 ನಾಯಿಗಳಿಗೆ ಆಹಾರ ಹಾಕಿ ಬರುತ್ತಿದ್ದಾರೆ. ಇವರಿಗೆ ಪೊಲೀಸರಿಗೆ ಪಾಸ್ ನೀಡಿದ್ದು, ಕೋತಿಗಳಿಗೆ ಆಹಾರ ಹಾಕಲು ಬೀರೂರು ಪೊಲೀಸರು ಸಹಕರಿಸಿದ್ದಾರೆ.
ಮಂಡಕ್ಕಿ, ಬಾಳೆಹಣ್ಣು, ಗೆಣಸು, ಮೊಸರನ್ನ, ಬಿಸ್ಕೆಟ್, ಕ್ಯಾರೇಟ್ ಸೇರಿದಂತೆ ವಿವಿಧ ಹಣ್ಣು-ತರಕಾರಿಗಳನ್ನು ನೀಡಿ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಬೀರೂರಿನ ಸುಜಯ್, ನಿತಿನ್, ಗಿರೀಶ್, ರಾಜೇಶ್, ಮಿಥುನ್, ಶ್ರೇಯಾಂಕ್, ಕಿರಣ್, ವಿನಾಯಕ್ ಗನ್, ಸಂಗಮೇಶ್, ಪವನ್ ದಿಲೀಪ್ ಎಂಬ ಯುವಕರ ಈ ಕಾರ್ಯಕ್ಕೆ ಕಾಫಿನಾಡಿನ ಜನ ಹಾಗೂ ಪೊಲೀಸರು ಕೂಡ ಶ್ಲಾಘಿಸಿದ್ದಾರೆ.