ಮಡಿಕೇರಿ: ಕೆಲಸ ಹರಸಿ ಬಂದು ಮೈಸೂರಿನಲ್ಲಿ ಸಿಲುಕಿದ್ದ 60 ಕ್ಕೂ ಹೆಚ್ಚು ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಕೇರಳಕ್ಕೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕೊಡಗಿನ ಕುಶಾಲನಗರ ಚೆಕ್ಪೋಸ್ಟ್ ನಲ್ಲಿ ನಡೆಯಿತು.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕುಶಾಲನಗರದ ಚೆಕ್ ಪೋಸ್ಟಿಗೆ ಭೇಟಿ ನೀಡಿದ್ದರು. ಇದೇ ವೇಳೆ ಮೈಸೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ಮೂರು ಬಸ್ಗಳಲ್ಲಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತಿತ್ತು. ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ಬಸ್ಗಳು ಪ್ರವೇಶ ಮಾಡಿದಕ್ಕೆ ಶಾಸಕ ಕೆ.ಜಿ. ಬೋಪಯ್ಯ ಕೆಂಡಾಮಂಡಲವಾದರು.
ಚೆಕ್ಪೋಸ್ಟಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗರಂ ಆದರು. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದರೂ ಮೈಸೂರು ಕಮಿಷನರ್ ಈ ಬಸ್ಗಳನ್ನು ಕೊಡಗಿನ ಮೂಲಕ ಕೇರಳಕ್ಕೆ ಕಳುಹಿಸಲು ಮುಂದಾಗಿದ್ದು ಏಕೆ? ಇಷ್ಟು ಕಾರ್ಮಿಕರನ್ನು ಕೇರಳಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಕಾಫಿ, ಟೀಗೆ ಅಥವಾ ಊಟಕ್ಕೆ ಎಂದು ಇಳಿಯದೇ ಇರುವುದಿಲ್ಲ. ಈ ವೇಳೆ ಯಾರಿಗಾದರೂ ವೈರಸ್ ಇದ್ದು, ಕೊಡಗಿನ ಜನತೆಗೆ ಹರಡಿದರೆ ಅದಕ್ಕೆ ಹೊಣೆ ಯಾರು? ಹೀಗಾಗಿ ಕೊಡಗಿನ ಮೂಲಕ ಕಾರ್ಮಿಕರನ್ನು ಸಾಗಿಸಬಾರದು ಎಂದು ಶಾಸಕರು ಬಸ್ಗಳನ್ನು ತಡೆ ಹಿಡಿದರು.
ಬೇರೆ ಯಾವ ಮಾರ್ಗದಲ್ಲಿ ಕಾರ್ಮಿಕರನ್ನು ಕೇರಳಕ್ಕೆ ಕಳುಹಿಸಲಿ ಎಂದು ಮೈಸೂರು ಜಿಲ್ಲೆಯಿಂದ ಆಗಮಿಸಿದ್ದ ಮೂರು ಬಸ್ಗಳನ್ನು ವಾಪಸ್ ಕಳುಹಿಸಿದರು. ಅಲ್ಲದೆ ಚೆಕ್ಪೋಸ್ಟ್ ನಲ್ಲಿರುವ ಅಧಿಕಾರಿಗಳು ಇನ್ನಷ್ಟು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿ ಕೆಲಸ ಮಾಡಲಿ ಎಂದರು.