ನವದೆಹಲಿ: ಭಾರತದ 5 ರಾಜ್ಯಗಳಲ್ಲಿ ಹೊಸದಾಗಿ 16 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ಗತಿ ಶಕ್ತಿ ಸಮ್ಮೇಳನದಲ್ಲಿ ಮಾತನಾಡಿದ ಸಿಂಧಿಯಾ, ಮಧ್ಯಪ್ರದೇಶದ ರೇವಾ, ಛತ್ತೀಸ್ಗಢದ ಅಂಬಿಕಾಪುರ, ಬಿಲಾಸ್ಪುರ ಮತ್ತು ಜಗದಲ್ಪುರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಿದ್ದೇವೆ. ಉತ್ತರ ಪ್ರದೇಶದಲ್ಲಿ ಒಂಬತ್ತು ವಿಮಾನ ನಿಲ್ದಾಣಗಳು, ರಾಜಸ್ಥಾನದಲ್ಲಿ ಒಂದು ವಿಮಾನ ನಿಲ್ದಾಣ ಹಾಗೂ ಮಹಾರಾಷ್ಟ್ರದಲ್ಲಿ ಎರಡು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಆಗಸ್ಟ್ 15 ರಂದು ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪ್ರಾರಂಭಿಸಿದರು. ಸಮಗ್ರ ಯೋಜನೆ ಮತ್ತು ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನದ ಮೂಲಕ ಬಹು-ಮಾದರಿ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಪಿಎಂ ಗತಿ ಶಕ್ತಿ ಯೋಜನೆಯಿಂದ ಇಂದು ದೇಶದಲ್ಲಿ ಬಹು ಮಾದರಿ ಸಂಪರ್ಕಕ್ಕೆ ವೇಗ ದೊರಕಿದೆ. ದೇಶದಲ್ಲಿ ಹೆಚ್ಚಿನ ಹೂಡಿಕೆಯನ್ನು ತರಲು ಹಾಗೂ ಉತ್ತಮ ಉದ್ಯೋಗವನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ: ರಾಕೇಶ್ ಟಿಕಾಯತ್
ದಕ್ಷಿಣ ಏಷ್ಯಾದ ದೇಶಗಳು ಸೇರಿದಂತೆ ವಿಶ್ವದ ಹಲವು ದೇಶಗಳು ಕಳೆದ 70 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯತ್ತ ಗಮನ ಹರಿಸಿವೆ. ಇದೀಗ ಆ ಎಲ್ಲಾ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳಾಗಿ ಹೊರಹೊಮ್ಮಿವೆ ಎಂದು ಸಿಂಧಿಯಾ ತಿಳಿಸಿದರು.