ದೆಹಲಿಯಲ್ಲಿ ಹಿಂಸಾಚಾರ, ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

Public TV
1 Min Read
delhi violence

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಗಳು ಕೈ ಮೀರಿದೆ. ಪ್ರತಿಭಟನೆಯಿಂದಾಗಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೌಜ್‍ಪುರ, ಗೋಕುಲ್‍ಪುರಿ, ಚಾಂದ್‍ಬಾಗ್ ನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಪ್ರತಿಭಟನಾ ಸ್ಥಳದಲ್ಲಿ 144 ಸೆಕ್ಷನ್ ಹೇರಲಾಗಿದೆ.

ಮೌಜ್‍ಪುರದಲ್ಲಿ ಪತ್ರಕರ್ತ ಆಕಾಶ್ ಅವರಿಗೆ ಗುಂಡಿಕ್ಕಲಾಗಿದೆ. ಇತ್ತ ಖಾಸಗಿ ವಾಹಿನಿಯ ವರದಿಗಾರ ಮತ್ತು ಕ್ಯಾಮೆರಾಮ್ಯಾನ್ ಮೇಲೆ ಗಂಭೀರ ಹಲ್ಲೆ ಮಾಡಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಈ ನಡುವೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿರುದ್ಧ ದೂರು ದಾಖಲಾಗಿದೆ. ದೆಹಲಿಯಲ್ಲಿ ಎರಡು ಪೊಲೀಸ್ ಠಾಣೆಯಲ್ಲಿ ಎಎಪಿ ಕಾರ್ಪೋರೇಟರ್ ರೇಷ್ಮಾ ನದೀಮ್ ಮತ್ತು ಹಸೀಬ್ ಉಲ್ ಹಸನ್ ಅವರು ದೂರು ದಾಖಲಿಸಿದ್ದಾರೆ. ಹಿಂಸಾಚಾರಕ್ಕೆ ಜನಸಮೂಹವನ್ನು ಪ್ರಚೋದಿಸಿರುವ ಆರೋಪದ ಮೇಲೆ ವಿಡಿಯೋ ಸಾಕ್ಷ್ಯ ಸಹಿತ ಲಿಖಿತ ದೂರು ದಾಖಲಿಸಲಾಗಿದೆ.

ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ಬುಧವಾರ ಈ ಅರ್ಜಿ ವಿಚಾರಣೆಗೆ ಬರಲಿದ್ದು, ದೆಹಲಿಯ ಹೊರ ಭಾಗದ ಅಧಿಕಾರಿಗಳಿಂದ ಎಸ್‍ಐಟಿ ತನಿಖೆ ನಡೆಸಬೇಕು ಮತ್ತು ಸೇನೆಯಿಂದ ದೆಹಲಿಯಲ್ಲಿ ಭದ್ರತೆ ಒದಗಿಸಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇತ್ತ ಮತ್ತೊಂದು ಕಡೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರಿಗೆ ರಕ್ಷಣೆ ನೀಡಬೇಕು ಹಾಗೂ ಹಿಂಸಾಚಾರ ನಡೆಸುವ ಪ್ರತಿಭಟನಾಕಾರರ ಮೇಲೆ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *