ಬಳ್ಳಾರಿ: ದೇವರ ಜಾತ್ರೆಯ ತೇರು ಎಳೆಯುವಾಗ ಅವಘಡ ಸಂಭವಿಸಿದ್ದು, ತೇರಿನ ಚಕ್ರದಡಿ ಸಿಲುಕಿ ಮಗು ಒಂದು ಕಾಲು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಒಡ್ಡೂರ ಗ್ರಾಮದಲ್ಲಿ ನಡೆದಿದೆ.
ಒಡ್ಡೂರ ಗ್ರಾಮದಲ್ಲಿ ಶನಿವಾರ ಹಳ್ಳದ ದೇವರ ಜಾತ್ರೆ ನಡೆದಿದೆ. ಸಂಜೆ ಸುಮಾರು 6 ಗಂಟೆಗೆ ದೇವರ ತೇರನ್ನು ಎಳೆಯಲಾಯಿತು. ಆದರೆ ಜಾತ್ರೆಯಲ್ಲಿ ಎಂದಿನಂತೆ ಈ ಬಾರಿ ಹೆಚ್ಚಿನ ಜನ ಸೇರಿದ್ದರು. ಹೀಗಾಗಿ ಜಾತ್ರೆಯ ತೇರನ್ನು ಎಳೆಯುವ ಬರದಲ್ಲಿ ಬೇರೆಡೆಗೆ ತೇರು ಜಲಿಸಿದೆ. ಆಗ ಮೂರು ಮಕ್ಕಳ ಕಾಲಿನ ಮೇಲೆ ತೇರಿನ ಚಕ್ರ ಹರಿದಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತೊರನಗಲ್ ನಿವಾಸಿ ಕವನ (12) ರಾಹುಲ್ (10) ಆಯುಷ್ಯ (8) ಮೂರು ಮಕ್ಕಳ ಕಾಲ ಮೇಲೆ ತೇರಿನ ಚಕ್ರ ಹರಿದಿದೆ. ಅದರಲ್ಲಿ ಬಾಲಕಿ ಕವನ ಪಾದ ನಚ್ಚುಗುಚ್ಚಾಗಿದೆ. ಉಳಿದ ಮಕ್ಕಳಿಗೆ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ತಕ್ಷಣ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನರು ತೇರನ್ನು ಬೇಕಾಬಿಟ್ಟಿಯಾಗಿ ಎಳೆದಿದ್ದು ಈ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.