-ಪೊಲೀಸರನ್ನು ಕಂಡು ಜನರು ಪರಾರಿ
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಮನವಿಯ ಜನತಾ ಕರ್ಫ್ಯೂವನ್ನೇ ಬಂಡವಾಳ ಮಾಡಿಕೊಂಡ ಕೋಳಿ ಫಾರಂ ಮಾಲೀಕನೊಬ್ಬ ಇತ್ತೀಚೆಗೆ ಕೊರೊನಾದಿಂದ ಬಿಕರಿಯಾಗದೆ ಉಳಿದ ಕೋಳಿಗಳ ಮಾರಾಟಕ್ಕೆ ಮುಂದಾಗಿದ್ದಾನೆ.
ಒಂದು ಕೋಳಿಗೆ 100 ರೂ.ಯಂತೆ ಮಾರಾಟ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಕ್ಕಲ ಬಚ್ಚಹಳ್ಳಿ ಬಳಿ ನಡೆಯಿತು. ಕೊರೊನಾದಿಂದಾಗಿ ಇತ್ತೀಚೆಗೆ ಬಾಯಲರ್ ಕೋಳಿಗಳನ್ನು ಯಾರೂ ಕೊಳ್ಳದೇ ನೂರಾರು ಕೋಳಿ ಫಾರ್ಮ್ಗಳಲ್ಲೇ ಕೋಳಿಗಳು ನರಳುವಂತಾಗಿತ್ತು. ಇದರಿಂದ ಬೇಸತ್ತ ಕೋಳಿ ಫಾರ್ಮ್ ಮಾಲೀಕರು 100 ರೂ.ಗೊಂದು ಕೋಳಿ ಎಂದು ಘೋಷಣೆ ಮಾಡಿದ್ದಾನೆ.
ಮಾಲೀಕ ಘೋಷಣೆ ಮಾಡಿದ್ದೇ ತಡ ಜನ ಮರಳೋ ಜಾತ್ರೆ ಮರಳೋ ಎನ್ನುವ ಲೆಕ್ಕದಲ್ಲಿ ಕೋಳಿ ಫಾರ್ಮ್ಗೆ ನುಗ್ಗಿದ ಜನ 100ರೂ.ಗೊಂದರಂತೆ ತಮಗೆ ಬೇಕಾದಷ್ಟು ಕೋಳಿಗಳನ್ನ ಬಾಚಿಕೊಂಡು ಹೋದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ 144 ಸೆಕ್ಷೆನ್ ಜಾರಿ ಮಾಡಲಾಗಿದ್ದು ಹಾಗೂ ಜನತಾ ಕರ್ಫ್ಯೂ ನಡುವೆ ಜನ ಜಮಾಯಿಸಿದ್ದರು.
ಇದನ್ನು ತಿಳಿದ ನಂದಿಗಿರಿಧಾಮದ ಪೊಲೀಸರು ಕೋಳಿ ಫಾರ್ಮ್ ಬಳಿ ಬಂದು ಜಮಾಯಿಸಿದ್ದ ಜನರನ್ನು ಚದರಿಸಿದರು. ಕೋಳಿ ಫಾರ್ಮ್ ಮಾಲೀಕರಿಗೆ ಕೋಳಿ ಮಾರಾಟ ಮಾಡದಂತೆ ಎಚ್ಚರಿಸಿದರು. ಇದರಿಂದ ಪೊಲೀಸರನ್ನು ಕಂಡ ಜನ ಎದ್ನೋಬಿದ್ನೋ ಎಂದು ಬೈಕ್ ಏರಿ ಪರಾರಿಯಾದರು.