ಬಳ್ಳಾರಿ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ.
ವಾರಣಾಸಿಯಲ್ಲಿ ಇಷ್ಟಲಿಂಗ ದೀಕ್ಷೆ ಸ್ವೀಕಾರ ಪಡೆಯುವ ವೇಳೆ ಪತಿ ಜನಾರ್ದನ ರೆಡ್ಡಿ, ಪುತ್ರ ಹಾಗೂ ಅರುಣಾ ತಂದೆ-ತಾಯಿ ಜೊತೆಗಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಆಪ್ತ ಶ್ರೀರಾಮುಲು ಅವರು ಕಾಶಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಕಳೆದ 2014 ರ ಮಾರ್ಚ್ ತಿಂಗಳಲ್ಲಿ ಶಿವಲಿಂಗ ದೀಕ್ಷೆ ಪಡೆದಿದ್ದರು. ಈಗ ಲಕ್ಷ್ಮಿ ಅರುಣಾ ದೀಕ್ಷೆ ಪಡೆದುಕೊಂಡಿದ್ದಾರೆ.
ದೀಕ್ಷೆ ಪಡೆದವರು ಮಾಂಸ ಮತ್ತಿತರ ಪದಾರ್ಥಗಳನ್ನು ಬಿಟ್ಟು, ನಿತ್ಯ ಶಿವಪೂಜೆ, ಗೋಪೂಜೆ ಮತ್ತು ಗಣಾರಾಧನೆ ಮಾಡಬೇಕು. ಶ್ರೀರಾಮುಲು ದೀಕ್ಷೆ ಪಡೆದ ಬಳಿಕ ನಿತ್ಯ ಎರಡು ಗಂಟೆಗಳ ಕಾಲ ಶಿವ ಪೂಜೆ ಮಾಡುತ್ತಾರೆ. ಇಷ್ಟಲಿಂಗ ಪೂಜೆಗೂ ಮುನ್ನ ಗೋಪೂಜೆ, ಶಿವಪೂಜೆ, ಗಣಾರಾಧನೆ, ಪಂಚಾಮೃತ ಅಭಿಷೇಕದ ವಿತರಣೆ ನಂತರವೇ ಉಪಹಾರ ಸೇವನೆ ಮಾಡುತ್ತಾರೆ.
ದೆಹಲಿ, ಬೆಂಗಳೂರು, ಗದಗ, ರಾಯಚೂರು ಮತ್ತು ಕಲಬುರಗಿಗೆ ತೆರಳಿದರೆ ಅಲ್ಲಿ ಶಿವಪೂಜೆಗಾಗಿ ಒಂದು ತಂಡವನ್ನು ಸಿದ್ಧಮಾಡಿಕೊಂಡಿದ್ದರು. ಇನ್ನೂ ಶ್ರೀರಾಮುಲು ಅವರಂತೆ ಅವರ ಪತ್ನಿಯೂ ಮಾಂಸ ಆಹಾರವನ್ನು ತ್ಯಜಿಸಿದ್ದು, ಮನೆಯಲ್ಲಿ ಈ ಆಹಾರಕ್ಕೆ ನಿಷೇಧ ಮಾಡಿದ್ದಾರೆ.
ಇಷ್ಟಲಿಂಗ ದೀಕ್ಷೆಯನ್ನು ಯಾರಾದರೂ ತೆಗೆದುಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ನಿಯಮಗಳಿಲ್ಲ ಅನ್ನೊದು ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ.