ಬೆಂಗಳೂರು: ಬಿಜೆಪಿಗೆ(BJP) ಸೆಡ್ಡು ಹೊಡೆದ ಮಾಜಿ ಸಚಿವ ಜನಾರ್ದನ ರೆಡ್ಡಿ(Janardhan Reddy) ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇಂದು ಬೆಂಗಳೂರಿನ(Bengaluru) ತನ್ನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದಾರೆ.
ಬಸವಣ್ಣ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡಿದ್ದೇನೆ. ಜಾತಿ, ಮತ, ಬೇಧ, ಭಾವ ಇಲ್ಲದೇ ಮೇಲು ಕೇಳು ಇಲ್ಲದ ಹಾಗೆ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಬಸವಣ್ಣನವರ ಸ್ಮರಣೆ ಮಾಡುತ್ತಾ ಸಾರ್ವಜನಿಕ ಬದುಕಿಗೆ ಬರುತ್ತಿದ್ದೇನೆ. ಬಿಜೆಪಿ ಜೊತೆ ನಾನು ಬಾಂಧವ್ಯವನ್ನು ಕಡಿದುಕೊಳ್ಳುತ್ತಿದ್ದೇನೆ. ಈ ಕಾರಣಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಮಾಣ ಮಾಡ್ತಿದ್ದೇನೆ ಎಂದು ತಿಳಿಸಿದರು.
ನಮ್ಮವರೇ ನನ್ನನ್ನು ಮುಗಿಸುವ ಪ್ರಯತ್ನ ಮಾಡಿದ್ದರು. ನಿಮ್ಮದೇ ಪಕ್ಷ ಇದ್ದರೂ ಯಾಕೆ ಹೀಗೆ ಆಗುತ್ತಿದೆ? ಸಿಬಿಐ, ಪೊಲೀಸ್ ಎಲ್ಲಾ ಸರ್ಕಾರದ ಕೈಯಲ್ಲಿ ಇದೆ ಅಂತಾರೆ. ಹೀಗಿದ್ದರೂ ಯಾಕೆ ನಿಮಗೆ ಹುಟ್ಟೂರಿನಲ್ಲಿ ಇರಲು ಬಿಡುವುದಿಲ್ಲ? ನಿಮ್ಮ ಜೊತೆಯಾಗಿ ಶಕ್ತಿಯಾಗಿ ನಾವು ಇರುತ್ತೇವೆ. ಮತ್ತೆ ಸಾರ್ವಜನಿಕ ಜೀವನಕ್ಕೆ ಬನ್ನಿ ಎಂದು ಜನ ಹೇಳಿದ್ದರು. ಈ ಕಾರಣಕ್ಕೆ ನಾನು ಹೊಸ ಪಕ್ಷವನ್ನು ಸ್ಥಾಪಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದರು.