ಬೆಂಗಳೂರು: ಜನವರಿ 14 ಮತ್ತು 15ರಂದು ಬೆಂಗಳೂರಿನ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಜಾನಪದ ಜಾತ್ರೆ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಜಾತ್ರೆ ನಡೆಯುತ್ತಿದ್ದ ಪೂರ್ವ ತಯಾರಿಯನ್ನು ಕಂದಾಯ ಸಚಿವ ಆರ್ ಅಶೋಕ್, ಮೇಯರ್ ಗೌತಮ್ ಕುಮಾರ್ ಮತ್ತು ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳ್ಳಿಗಾಡಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಜಾನಪದ ಜಾತ್ರೆ ಪ್ರಾರಂಭಿಸಲಾಗಿದೆ. 2 ದಿನಗಳ ಕಾಲ ಇಲ್ಲಿ ಹಳ್ಳಿಯ ಸೊಗಡಿನ ವಾತಾವರಣವಿರಲಿದೆ. ಸಂಕ್ರಾಂತಿಯು ಬಂದಿರುವುದರಿಂದ ಗೋ ಪೂಜೆ, ಎತ್ತಿನ ಗಾಡಿ ಓಟ, ಕಡಲೆಕಾಯಿ ಪರೀಷೆಯನ್ನೂ ನಡೆಸಲಾಗುತ್ತಿದೆ. ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ 36 ತಂಡಗಳು ಆಗಮಿಸಲಿವೆ. ಸಿದ್ಧಿ ಜನಾಂಗ, ಹಾಲಕ್ಕಿ ಒಕ್ಕಲಿಗ ಸಮಾಜದ ಕಲಾವಿದರೂ ಸಹ ಆಗಮಿಸಲಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಾನಪದ ಜಾತ್ರೆ ಪ್ರಾರಂಭಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾನಪದ ಜಾತ್ರೆಯನ್ನು ರದ್ದುಗೊಳಿಸಿದ್ದರು. ಇದೀಗ ಪುನಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ಜ. 14ರಂದು ಬೆಳಗ್ಗೆ ಜಾನಪದ ಜಾತ್ರೆಗೆ ಚಾಲನೆ ಸಿಕ್ಕಿದ್ದರೆ, 15ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.