ಜಮ್ಮು: ಮೂವರು ಉಗ್ರರು ಕಳೆದ 5 ದಿನಗಳಿಂದ ಊಟ ಮಾಡಿಲ್ಲ ಎಂದು ಮನೆಗೆ ನುಗ್ಗಿ ಅಲ್ಲಿದ್ದ ಬಿಸ್ಕೆಟ್ ಮತ್ತು ಸೇಬುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಜಮ್ಮು-ಕಾಶ್ಮೀರ ರಾಜ್ಯದ ಉದಮಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಜಮ್ಮು-ಶ್ರೀನಗರದ ಹೆದ್ದಾರಿಯಲ್ಲಿ ಫಾರೆಸ್ಟ್ ಗಾರ್ಡ್ ಮತ್ತು ಓರ್ವ ಸಿಆರ್ ಪಿಎಫ್ ಯೋಧನ ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದರು. ಉಗ್ರರನ್ನು ಬಂಧಿಸಲು ಅಧಿಕಾರಿಗಳು ಎಲ್ಲೆಡೆ ಪೋಸ್ಟರ್ ಹಾಕಿದ್ದರು. ಭಾರತದ ಗಡಿಯಿಂದ ಹೊರಹೋಗದಂತೆ ಎಲ್ಲೆಡೆ ಕಟ್ಟೆಚ್ಚರವನ್ನು ಹಾಕಲಾಗಿದೆ. ಇದೇ ಉಗ್ರರು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ತಿನ್ನಲು ಬಿಸ್ಕೆಟ್ ಮತ್ತು ಸೇಬು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದಿರುವ ಯೋಧರು ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬುಧವಾರ ಸಂಜೆ 8 ಗಂಟೆ ವೇಳೆಗೆ ಮನೆಗೆ ಶಸ್ತ್ರಾಸ್ತ್ರಗಳೊಂದಿಗೆ ಒಳಪ್ರವೇಶಿದ ಉಗ್ರರು ತಮ್ಮ ಕುರಿತು ಯಾರಿಗೂ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ಐದು ದಿನಗಳಿಂದ ಏನು ತಿಂದಿಲ್ಲ ಎಂದು ಮನೆಯಲ್ಲಿದ್ದ ಬಿಸ್ಕೆಟ್ ಹಾಗೂ ಸೇಬು ಹಣ್ಣು ತೆಗೆದುಕೊಂಡು ಬ್ಯಾಗ್ನಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಅಲ್ಲಿಂದ ತೆರಳಲು ಕಾರ್ ಬೇಕೆಂದು ಬೇಡಿಕೆ ಇಟ್ಟಿದ್ದು, ಆದರೆ ಮನೆಯ ಮಾಲೀಕನ ಬಳಿ ಕಾರು ಇಲ್ಲದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಗ್ರರ ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಈ ಘಟನೆಗೂ ಮುನ್ನ ಬುಧವಾರ ಬೆಳಗ್ಗೆ ಉಗ್ರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಟ್ರಕ್ ಒಂದಕ್ಕೆ ಹತ್ತಿ ಪರಾರಿಯಾಗಲು ಯತ್ನಿಸಿದ್ದರು ಎಂಬ ಮಾಹಿತಿ ಆಧಾರಿಸಿ ಟ್ರಕ್ ಚಾಲಕ ಹಾಗೂ ನಿರ್ವಾಹಕನನ್ನ ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಜಮ್ಮು ಕಾಶ್ಮೀರ ಪೊಲೀಸರು ಸ್ಥಳೀಯರ ಸಹಕಾರವನ್ನು ಕೋರಿದ್ದು, ಈ ಕುರಿತು ಮಾಹಿತಿ ನೀಡಿದ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡಲಾವುದು ಎಂದು ತಿಳಿಸಿದ್ದಾರೆ. ಉಳಿದಂತೆ ಗ್ರಾಮದ ಮನೆಗೆ ನುಗಿದ್ದ ಉಗ್ರರ ವಯಸ್ಸು 18 ರಿಂದ 22ರ ಒಳಗೆ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv