ಮೈಸೂರು: ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಕಳೆದ ಬುಧವಾರ ಉಗ್ರಗಾಮಿಗಳ ಜೊತೆಗಿನ ಕಾದಾಟದಲ್ಲಿ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಭದ್ರೇಗೌಡನ ಕೊಪ್ಪಲಿನ ಯೋಧ ರಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ರಮೇಶ್ ಅವರನ್ನು ನೋಡಲು ಅವಕಾಶ ಕಲ್ಪಿಸಿ ಎಂದು ರಮೇಶ್ ಪತ್ನಿ ರೇಖಾ ಮತ್ತು ತಾಯಿ ಪುಟ್ಟಮ್ಮ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಯೋಧ ರಮೇಶ್ ಅವರ ಆರೋಗ್ಯ ಸ್ಥಿತಿ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ, ಖುದ್ದಾಗಿ ಅವರನ್ನು ನೋಡಬೇಕಿದೆ. ಇದರಿಂದ, ನಮ್ಮ ಕುಟುಂಬದ ಒಬ್ಬರನ್ನು ಅಲ್ಲಿಗೆ ಕಳುಹಿಸಲು ಅವಕಾಶ ಕಲ್ಪಿಸಿ ಎಂದು ಅವರು ಮೈಸೂರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಜಮ್ಮುವಿನ ಕುಪ್ವಾರಾ ಜಿಲ್ಲೆಯ ಪಂಚಗಾವು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಫೈರಿಂಗ್ ನಡೆಸಿದ್ದರು. ಇದರಲ್ಲಿ, ಇಬ್ಬರು ಭಾರತೀಯ ಯೋಧರು ಹುತಾತ್ಮರಾದರೆ ಈ ತಂಡದಲ್ಲಿದ್ದ ಯೋಧ ರಮೇಶ್ ಗಾಯಗೊಂಡು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರಮೇಶ್ ಆಸ್ಪತ್ರೆಗೆ ದಾಖಲಾಗಿರೋ ಬಗ್ಗೆ ಸೇನಾ ಅಧಿಕಾರಿಗಳು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ, ಯೋಧನ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಕುಟುಂಬಕ್ಕೆ ಮನವರಿಕೆ ಆಗುತ್ತಿಲ್ಲ. ಹೀಗಾಗಿ ಖುದ್ದಾಗಿ ಹೋಗಿ ನೋಡಲು ಅವಕಾಶ ಕೇಳುತ್ತಿದ್ದಾರೆ.