-ಬಾಗಲಕೋಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವು
ಬಾಗಲಕೋಟೆ: ಇಂದು ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇಹಲೋಕ ತ್ಯಜಿಸಿದ್ದಾರೆ.
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಬಳಿ ನಸುಕಿನ ಜಾವ 4.30ರ ಸುಮಾರಿಗೆ ಎದುರಿನಿಂದ ಬಂದ ಲಾರಿ ತಪ್ಪಿಸಲು ಹೋಗಿ ರಸ್ತೆ ಬದಿಯ ಪೂಲ್ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಸಿದ್ದುನ್ಯಾಮಗೌಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ರು. ಕೂಡಲೇ ಎಲ್ಲರನ್ನು ನಗರದ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಾಸಕ 70 ವರ್ಷದ ಸಿದ್ದುನ್ಯಾಮಗೌಡ ಎದೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ರು. ಸಂಪುಟದಲ್ಲಿ ಸ್ಥಾನ ಪಡೆಯೋ ಸಲುವಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದ ಶಾಸಕ ಸಿದ್ದು ನ್ಯಾಮ ಗೌಡ, ಕಳೆದ ರಾತ್ರಿ ಗೋವಾಗೆ ವಿಮಾನದಲ್ಲಿ ಬಂದು ರಸ್ತೆ ಮಾರ್ಗವಾಗಿ ಜಮಖಂಡಿಗೆ ಮರಳುತ್ತಿದ್ರು. ದೆಹಲಿಯ ನಿಜಾಮುದ್ದಿನ್ ಔಲಿಯಾ ದರ್ಗಾಕ್ಕೆ ಹೋಗಿದ್ದ ಮೌಲಾನಾ ರಿಜ್ವಿ ಮತ್ತು ಅಬ್ದುಲ್ ರಶೀದ್ರನ್ನ ಶಾಸಕರಾದ ಸಿದ್ದು ನ್ಯಾಮಗೌಡ ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಜಮಖಂಡಿಗೆ ಮರಳುತ್ತಿದ್ರು. ಇವರಿಬ್ರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಚಾಲಕ ಪರಮಾನಂದ್ ಅಂಬಿ ಮತ್ತು ಅನ್ವರ್ ಮೊಮಿನ್ ಕೂಡ ಗಾಯಗೊಂಡಿದ್ದು, ಅವರಿಗೂ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಇದೀಗ ಶಾಸಕ ಸಿದ್ದುನ್ಯಾಮಗೌಡ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಗ್ತಿದೆ. ಶಾಸಕರ ಪುತ್ರ ಆನಂದ್ ನ್ಯಾಮಗೌಡ ಸೇರಿದಂತೆ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.