ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಮ್ಮನ್ನ ಅಗಲಿ ಒಂದು ವರ್ಷ ಕಳೆದಿದೆ. ಹೀಗಿದ್ರು ಸಹ ಪುನೀತ್ ಅವರು ಓಡಾಡಿದ ಜಾಗಗಳು ಅವರು ಊಟ ಮಾಡಲು ಹೋಗುತ್ತಿದ್ದ ಹೊಟೇಲ್ಗಳು ಇಂದಿಗೂ ಸಹ ನಮ್ಮನ್ನ ಕಾಡುತ್ತಿವೆ. ಅಪ್ಪುಗೆ ಮಂಡ್ಯ ಬಾಡೂಟ ಎಂದ್ರೆ ಪಂಚಪ್ರಾಣ. ಅದ್ರಲ್ಲೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನಲ್ಲಿ (Baburayan Koppalu) ಇರುವ ಜೈ ಭುವನೇಶ್ವರಿ ಹೊಟೇಲ್ನ (Jai Bhubaneswari Hotel) ಮಂಸಹಾರ ಎಂದರೆ ಪುನೀತ್ ಅವರಿಗೆ ಅಚ್ಚುಮೆಚ್ಚಿನ ಊಟ.
ಈ ಹೊಟೇಲ್ನ ಕಾಲ್ ಸೂಫ್, ಬೋಟಿಗೊಜ್ಜು, ಮಟನ್ ಕುರ್ಮ, ಮುದ್ದೆ ಎಂದ್ರೆ ಪಂಚಪ್ರಾಣ. ಮೈಸೂರಿಗೆ ತೆರಳುವ ಮುನ್ನ ಹಾಗೂ ಈ ಭಾಗದಲ್ಲಿ ಶೂಟಿಂಗ್ ಮಾಡುವಾಗ ಈ ಹೊಟೇಲ್ನಲ್ಲಿ ಅವರು ಊಟ ಮಾಡಿ ಮುಂದಿನ ಕೆಲಸ ಮಾಡುತ್ತಿದ್ರು. ಜನ ಜಾಸ್ತಿ ಇದ್ದ ವೇಳೆಯಲ್ಲಿ ಕಾರಿಗೆ ತರಿಸಿಕೊಂಡು ತಿಂದು ಹೋದ ಎಷ್ಟೋ ಉದಾಹರಣೆಗಳು ಸಹ ಇವೆ. ಪುನೀತ್ ರಾಜ್ಕುಮಾರ್ ಅವರಿಗೆ ಈ ಹೊಟೇಲ್ ಪರಿಚಯ ಮಾಡಿಸಿದ್ದು, ಅವರ ತಂದೆಯಾದ ರಾಜ್ಕುಮಾರ್ ಅವರು ಎನ್ನುವುದು ವಿಶೇಷವಾಗಿದೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ
ರಾಜ್ಕುಮಾರ್ ಅವರಿಗೂ ಸಹ ಜೈ ಭುವನೇಶ್ವರಿ ಹೊಟೇಲ್ ಊಟ ಎಂದ್ರೆ ಪಂಚಪ್ರಾಣವಾಗಿತ್ತು. ಹೀಗಾಗಿ ತಮ್ಮ ಕುಟುಂಬ ಸಮೇತರಾಗಿ ಸಾಕಷ್ಟು ಬಾರಿ ಈ ಹೊಟೇಲ್ಗೆ ಬಂದಿದ್ದಾರೆ. 1970 ರಲ್ಲಿ ಆರಂಭವಾಗಿರುವ ಈ ಹೊಟೇಲ್ ಆರಂಭದಲ್ಲಿ ಶೆಡ್ ಹೊಟೇಲ್ ಆಗಿತ್ತು. ಇದೀಗ ಮಾರ್ಪಾಡಾಗಿದೆ. ಈ ಹೊಟೇಲ್ಗೆ ರಾಜ್ಕುಮಾರ್ ಅವರು ಹೆಚ್ಚಾಗಿ ಬರುತ್ತಿದ್ದ ಕಾರಣ ಈ ಭಾಗದ ಜನರು ಇಂದಿಗೂ ಈ ಹೊಟೇಲ್ನ್ನು ರಾಜ್ಕುಮಾರ್ ಹೊಟೇಲ್ ಎಂದೆ ಕರೆಯುತ್ತಾರೆ.
ಇಲ್ಲಿನ ಮಾಲೀಕರು ಹಾಗೂ ಸಿಬ್ಬಂದಿಗಳು ಅಪ್ಪು ಈ ಹೊಟೇಲ್ಗೆ ಬರುತ್ತಿದ್ದದ್ದು, ಇವರೊಂದಿಗೆ ಬೆರೆತು ಮಾತನಾಡುತ್ತಿದ್ದದು ಯಾವುದನ್ನು ಮರೆತಿಲ್ಲ. ಅದ್ರಲ್ಲೂ ಪುನೀತ್ ರಾಜ್ಕುಮಾರ್ ಅವರು ಸಿಬ್ಬಂದಿಗಳಿಗೆ ಯಾರಿಗೂ ಕಾಣದ ಹಾಗೆ ಟಿಪ್ಸ್ ಕೊಟ್ಟು ಬೆನ್ನು ತಟ್ಟಿ ಹೀಗೆ ಕೆಲಸ ಮಾಡಿಕೊಂಡು ಹೋಗಿ ಎಂದು ಹೇಳುತ್ತಿದ್ದ ಮಾತನ್ನಿ ಇಲ್ಲಿನ ಮಾಲೀಕರು ಇಂದು ಮರೆತಿಲ್ಲ. ಅಪ್ಪು ಅವರನ್ನು ಇಂದು ಎಂದೂ ಮರೆಯಲು ಸಾಧ್ಯವಿಲ್ಲ. ನಮ್ಮೊಂದಿಗೆ ಅವರು ಯಾವಾಗಲೂ ಇರುತ್ತಾರೆ ಎಂದು ಈ ಹೊಟೇಲ್ ಮಾಲೀಕರು ಹೇಳಿದ್ದಾರೆ.