ಅಮರಾವತಿ: ಮೇ 30 ರಂದು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಜಗನ್ ಮೋಹನ್ ರೆಡ್ಡಿ ತಮ್ಮ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದಾರೆ.
ಇಂದು ಸಿಎಂ ಜಗನ್ ತಮ್ಮ ಪಕ್ಷದ ಶಾಸಕಾಂಗ ಸಭೆಯನ್ನು ನಡೆಸಿದ್ದು, ಈ ವೇಳೆ ಎಲ್ಲಾ ಜಾತಿಗಳಿಗೆ ಪ್ರತಿನಿತ್ಯ ನೀಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಂದಹಾಗೇ ಈ ನಿರ್ಧಾರ ದಾಖಲೆ ಆಗಲಿದ್ದು, ಮೊಟ್ಟ ಮೊದಲ ಬಾರಿಗೆ ಐವರು ಡಿಸಿಎಂ ಗಳನ್ನು ನೇಮಿಸಿದ ಸಿಎಂ ಎನಿಸಿಕೊಳ್ಳಲಿದ್ದಾರೆ.
ಸಿಎಂ ಜಗನ್ ಕ್ಯಾಬಿನೆಟ್ ನಲ್ಲಿ 25 ಸಚಿವರು ನೇಮಕವಾಗಿದ್ದು, ಶನಿವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇತ್ತ ಜಗನ್ ಆಯ್ಕೆ ಮಾಡಿರುವ ಡಿಸಿಎಂಗಳಲ್ಲಿ ಪರಿಶಿಷ್ಟ ಪಂಗಡ, ಪ.ಜಾತಿ, ಹಿಂದುಳಿದ ವರ್ಗಗಗಳು, ಅಲ್ಪ ಸಂಖ್ಯಾತರು ಹಾಗೂ ಕಾಪು ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ.
ಆಂಧ್ರ ಸರ್ಕಾರದಲ್ಲಿ ರೆಡ್ಡಿ ಸಮುದಾಯಕ್ಕೆ ಸಿಂಹಪಾಲು ಸಿಗಲಿದೆ ಎಂಬ ನಿರೀಕ್ಷೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿದೆ. ದುರ್ಬಲ ವರ್ಗಗಳ ಸಮುದಾಯದ ನಾಯಕರು ತನ್ನ ಕ್ಯಾಬಿನೆಟ್ ಸದಸ್ಯರಾಗಿರುತ್ತಾರೆ ಎಂದು ಜಗನ್ ತಿಳಿಸಿದ್ದಾರೆ. ಅಲ್ಲದೇ ಸಚಿವರ ಕಾರ್ಯ ಸಾಧನೆ ಮೇಲೆ ಮುಂದಿನ ಹಂತದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಇದೆ ಎಂದು ತಿಳಿಸಿದ್ದಾರೆ.
46 ವರ್ಷದ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ರಾಜಶೇಖರ್ ರೆಡ್ಡಿ ಪಕ್ಷ ಆಂಧ್ರಪ್ರದೇಶ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಗಳಿಸಿತ್ತು. 175 ವಿಧಾನಸಭಾ ಸ್ಥಾನಗಳ ಪೈಕಿ 151 ಸ್ಥಾನಗಳನ್ನು ಪಕ್ಷ ಪಡೆದಿತ್ತು. ಅಲ್ಲದೇ 25 ಲೋಕಸಭಾ ಸ್ಥಾನಗಳಲ್ಲಿ 22 ರಲ್ಲಿ ಗೆಲುವು ಪಡೆದಿತ್ತು. ಈ ಹಿಂದೆ ಆಂಧ್ರಪ್ರದೇಶ ಸಿಎಂ ಆಗಿದ್ದ ತೆಲುಗು ದೇಶಂ ಪಕ್ಷದ ಚಂದ್ರಬಾಬುನಾಯ್ಡು ಸರ್ಕಾರದಲ್ಲಿ ಇಬ್ಬರು ಡಿಸಿಎಂಗಳನ್ನು ನೇಮಕ ಮಾಡಲಾಗಿತ್ತು. ಒಬ್ಬರು ಕಾಪು ಸಮುದಾಯದ ನಾಯಕರಾಗಿದ್ದರೆ, ಮತ್ತೊಬ್ಬರು ಹಿಂದುಳಿದ ವರ್ಗಗಳಿಂದ ನೇಮಕವಾಗಿದ್ದರು.