ಹುಬ್ಬಳ್ಳಿ: ಸಚಿವ ಡಿಕೆ ಶಿವಕುಮಾರ್ ಅವರಿಗೆ ಕುಂದಗೋಳ ಉಪ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಕಾರ್ಯಕರ್ತರೇ ಇಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರನ್ನು ಕರೆಯುತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಕೈ ಹಾಕಿದರೆ ಅದರ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಕೆಲಸ ಡಿಕೆಶಿ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಕೈ ಹಾಕಿದರೆ ಹುಷಾರ್. ಇದರ ಪರಿಣಾಮ ನೆಟ್ಟಗಿರಲ್ಲ. ಇದು ಕನಕಪುರ, ರಾಮನಗರ ಅಲ್ಲ. ಇಲ್ಲಿ ಯಾರನ್ನು ಖರೀದಿಸಲು ಸಾಧ್ಯವಿಲ್ಲ. ಯಾಕೆ ಕಾಂಗ್ರೆಸ್ನಲ್ಲಿ ಉತ್ತರ ಕರ್ನಾಟಕದಲ್ಲಿ ನಾಯಕರೇ ಇಲ್ಲವೇ ಎಂದು ಕಿಡಿಕಾರಿದರು. ಇದನ್ನೂ ಓದಿ:ಶಿವಳ್ಳಿ ಸಾವಿನ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರೀರಾಮುಲು!
ಶಾಸಕ ಶ್ರೀರಾಮುಲು ದಿವಂಗತ ಸಚಿವ ಸಿ.ಎಸ್ ಶಿವಳ್ಳಿ ಸಾವಿನ ವಿಚಾರವಾಗಿ ಕೊಟ್ಟಿರುವ ಹೇಳಿಕೆಯನ್ನು ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡರು. ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳವೇ ಕಾರಣ ಎಂದು ಶ್ರೀ ರಾಮುಲು ಹೇಳಿದ್ದರು. ಹೌದು ಶಿವಳ್ಳಿ ಅವರಿಗೆ ಮಂತ್ರಿ ಸ್ಥಾನ ಸಿಗದೇ ಇದ್ದಾಗ ಅವರಿಗೆ ಸಾಕಷ್ಟು ನೋವಾಗಿತ್ತು. ಆ ನೋವನ್ನು ನನ್ನ ಮುಂದೆಯೇ ಹೇಳಿಕೊಂಡಿದ್ದರು. ಆ ನೋವಿನಿಂದ ಅವರು ಸಾಕಷ್ಟು ಬಳಲಿದ್ದರು. ಈ ಸಂಬಂಧ ಕಾಂಗ್ರೆಸ್ ದೂರು ಕೊಡಲಿ ಅದಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದರು.