ಹುಬ್ಬಳ್ಳಿ: ಪಕ್ಷದಲ್ಲಿ ನಿಷ್ಠೆಯಿಂದಿರುವವರಿಗೆ ಖಂಡಿತ ಒಳ್ಳೆಯ ಅವಕಾಶವಿದೆ. ಆತುರದ ನಿರ್ಧಾರ ತಗೆದುಕೊಳ್ಳುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಬಿಜೆಪಿ ಅತೃಪ್ತರ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಅನರ್ಹ ಶಾಸಕರ ಕುರಿತು ಮಹತ್ವದ ತೀರ್ಪು ಬರಲಿದೆ. ಅದರ ಮೇಲೆ ಮುಂದಿನ ರಾಜ್ಯದ ರಾಜಕಾರಣ ನಿರ್ಧಾರವಾಗಲಿದೆ. ತೀರ್ಪು ಬರುವವರೆಗೂ ಕಾದುನೋಡಬೇಕಿದೆ ಎಂದರು.
ಬಿಜೆಪಿಯ ಅತೃಪ್ತ ನಾಯಕರು ಸಿದ್ದರಾಮಯ್ಯ ಭೇಟಿ ಮಾಡಿದ ಬಗ್ಗೆ ನಾನು ಏನು ಹೇಳುವುದಿಲ್ಲ. ಸಿದ್ದರಾಮಯ್ಯ ಅವರು ಸರ್ಕಾರ ಅತಂತ್ರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಉಪಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ. ಸ್ಥಳೀಯ ಸಂಸ್ಥೆಯ ಚುನಾವಣೆ ಬೇರೆ, ಉಪಚುನಾವಣೆ ಬೇರೆ. ಒಂದು ಚುನಾವಣೆ ಮತ್ತೊಂದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಶಿವಸೇನೆಯ ಪರಿಸ್ಥಿತಿಯೂ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದ ಪರಿಸ್ಥಿತಿ ಆಗಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ. ಅಧಿಕಾರದ ಆಸೆಯ ಸಲುವಾಗಿ ಶಿವಸೇನೆ ಬೇರೆ ಪಕ್ಷಗಳೊಂದಿಗೆ ಹೋಗುತ್ತಿದೆ. 104 ಸ್ಥಾನ ಪಡೆದವರು ಮುಖ್ಯಮಂತ್ರಿ ಆಗಬೇಕೋ ಅಥವಾ 54 ಸ್ಥಾನಗಳನ್ನು ಪಡೆದವರು ಮುಖ್ಯಮಂತ್ರಿ ಆಗಬೇಕೋ, 3-4 ಸ್ಥಾನಗಳು ಅದಲು ಬದಲಾಗಿದ್ದರೆ 50:50 ಅನ್ನಬಹುದಿತ್ತು. ಆದರೆ ಶಿವಸೇನೆ ಬಿಜೆಪಿ ಗೆದ್ದ ಅರ್ಧದಷ್ಟು ಸ್ಥಾನಗಳನ್ನು ಸಹ ಗೆದ್ದಿಲ್ಲ. ತಾತ್ವಿಕವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದರೆ ಕರ್ನಾಟಕದಲ್ಲಿ ಆದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿ ಶಿವಸೇನೆಗೂ ಆಗಲಿದೆ ಎಂದರು.